ನುಡಿದ ಕಾಲಾವಧಿಗೆ ಜರೆ ತೆರೆ
ಯಡಸಿದವು ಜಾಣಿನಲಿ ಸತ್ಯವ
ನಡೆಸಿದಿರಿ ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳು ಕೈ
ದುಡುಕಿದರೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ (ಅರಣ್ಯ ಪರ್ವ, ೧೬ ಸಂಧಿ, ೨೮ ಪದ್ಯ)
ತಾತ್ಪರ್ಯ:
ನೀವು ಮಾತುಕೊಟ್ಟ ಅರಣ್ಯವಾಸದ ಅವಧಿಗೆ ಮುಪ್ಪು ಬಂದಿದೆ. ಕೆಲವೇ ದಿನಗಳು ಈಗ ಉಳಿದಿವೆ. ಇಷ್ಟು ದಿನ ಜಾಣತನದಿಂದ ಸತ್ಯಮಾರ್ಗದಲ್ಲಿ ನಡೆದಿದ್ದೀರಿ, ಕೊನೆಯಲ್ಲಿ ಹಿರಿಮೆಯನ್ನು ಕಳೆದುಕೊಳ್ಳಬೇಡಿ. ಕರ್ಣನೇ ಮೊದಲಾದ ಕುಹಕಿಗಳು ದುಡುಕಿ ಆ ಕೃತ್ಯವನ್ನು ಮಾಡಲು ಬಂದರೆ ನೀವು ದುಡುಕದೆ ನಿಧಾನಿಸೆ, ಧರ್ಮದ ದಡವನ್ನು ಸೇರಿದರೆ ವಿಜಯ ಮಾರ್ಗದಲ್ಲಿ ಕ್ಷಿಪ್ರವಾಗಿ ಮುಂದುವರೆಯುವಿರಿ ಎಂದು ಶ್ರೀಕೃಷ್ಣನು ಎಚ್ಚರಿಸಿ ಆಶೀರ್ವದಿಸಿದನು.
ಅರ್ಥ:
ನುಡಿ: ಮಾತಾಡು; ಕಾಲ: ಸಮಯ; ಅವಧಿ: ಗಡು, ಸಮಯದ ಪರಿಮಿತಿ; ಜರೆ: ಮುಪ್ಪು; ತೆರೆ: ತೆಗೆ, ಬಿಚ್ಚು; ಅಡಸು: ಬಿಗಿಯಾಗಿ ಒತ್ತು; ಜಾಣಿನಲಿ: ಬುದ್ಧಿವಂತಿಕೆ; ಸತ್ಯ: ದಿಟ;ನಡೆಸು: ಮುನ್ನಡೆ, ಚಲಿಸು; ಕಡೆ: ಕೊನೆ; ಉನ್ನತಿ: ಏಳಿಗೆ; ಕೆಡಿಸು: ಹಾಳುಮಾಡು; ಕಡು: ವಿಶೇಷ, ಅಧಿಕ; ಮನ: ಮನಸ್ಸು; ಆದಿ: ಮುಂತಾದ; ಕೈ: ಹಸ್ತ; ದುಡುಕು: ಆತುರ, ಅವಸರ; ಧರ್ಮ: ಧಾರಣೆ ಮಾಡಿದುದು; ತಡಿ:ದಡ, ತೀರ; ಜಾರು: ಬೀಳು; ಜಯ: ಗೆಲುವು; ಅಧ್ವ: ದಾರಿ, ಮಾರ್ಗ; ಜಂಘಾಲ: ಶೀಘ್ರ ಓಟದ, ಚಿಗರೆ; ಅರಹು: ತಿಳಿ;
ಪದವಿಂಗಡಣೆ:
ನುಡಿದ +ಕಾಲ+ಅವಧಿಗೆ +ಜರೆ +ತೆರೆ
ಯಡಸಿದವು +ಜಾಣಿನಲಿ +ಸತ್ಯವ
ನಡೆಸಿದಿರಿ +ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳು ಕೈ
ದುಡುಕಿದರೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ
ಅಚ್ಚರಿ:
(೧) ಅರಣ್ಯವಾಸ ಅಂತ್ಯದಲ್ಲಿದೆ ಎಂದು ಹೇಳಲು – ನುಡಿದ ಕಾಲಾವಧಿಗೆ ಜರೆ ತೆರೆ
ಯಡಸಿದವು
(೨) ಕೃಷ್ಣನ ಸಲಹೆ – ಧರ್ಮದತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ