ಧನಮದವ ಸತ್ಕುಲಮದವ ಯೌ
ವನಮದವ ವಿದ್ಯಾಮದವ ಪರಿ
ಜನಮದವ ವೈಭವಮದವನಾಚಾರಪದ ಮದವ
ಮನನದಿಂ ಶ್ರವಣದಿ ನಿಧಿ ಧ್ಯಾ
ಸನದಿನಿವುಗಳನೊತ್ತಿ ವಿದ್ಯಾ
ವಿನಯ ಸೌಶೀಲ್ಯದಲಿ ನಡೆವುದು ವಿಪ್ರ ಕೇಳೆಂದ (ಅರಣ್ಯ ಪರ್ವ, ೧೬ ಸಂಧಿ, ೧೫ ಪದ್ಯ)
ತಾತ್ಪರ್ಯ:
ಧರ್ಮವ್ಯಾಧನು ಬ್ರಹ್ಮಚಾರಿಗೆ, ಧನಮದ, ಕುಲಮದ, ಯೌವನಮದ, ವಿದ್ಯಾಮದ, ಪರಿಜನಮದ, ವೈಭವಮದ, ನಾನು ಸದಾಚಾರಿಯೆಂಬ ಮದ ಇವುಗಳನ್ನು ಶ್ರವಣ, ಮನನ, ನಿಧಿಧ್ಯಾಸನಗಳಿಂದ ಗೆದ್ದು, ವಿದ್ಯೆ, ವಿನಯ, ಸುಶೀಲಗಳಿಂದ ನಡೆಯಬೇಕು ಎಂದು ಹೇಳಿದನು.
ಅರ್ಥ:
ಧನ: ಐಶ್ವರ್ಯ; ಮದ: ಅಹಂಕಾರ; ಕುಲ: ವಂಶ; ಸತ್ಕುಲ: ಒಳ್ಳೆಯ ವಂಶ; ಯೌವನ: ತಾರುಣ್ಯ; ವಿದ್ಯ: ಜ್ಞಾನ; ಪರಿಜನ: ಬಂಧುಬಳಗ; ವೈಭವ: ಶ್ರೇಷ್ಠತೆ, ಆಡಂಬರ; ಆಚಾರ: ಒಳ್ಳೆಯ ನಡತೆ; ಮನನ: ಧ್ಯಾನ; ಶ್ರವಣ: ಕೇಳು; ನಿಧಿಧ್ಯಾಸನ: ಏಕಾಗ್ರತೆ; ಒತ್ತು: ಆಕ್ರಮಿಸು, ಮುತ್ತು; ವಿನಯ: ಒಳ್ಳೆಯತನ, ಸೌಜನ್ಯ; ಸೌಶೀಲ್ಯ: ಒಳ್ಳೆಯ ನಡತೆ, ಸದಾಚಾರ; ನಡೆ: ಮುನ್ನಡೆ, ಚಲಿಸು; ವಿಪ್ರ: ಬ್ರಾಹ್ಮಣ;
ಪದವಿಂಗಡಣೆ:
ಧನ+ಮದವ +ಸತ್ಕುಲ+ಮದವ +ಯೌ
ವನ+ಮದವ +ವಿದ್ಯಾ+ಮದವ+ ಪರಿ
ಜನ+ಮದವ+ ವೈಭವ+ಮದವನ್+ಆಚಾರಪದ +ಮದವ
ಮನನದಿಂ+ ಶ್ರವಣದಿ+ ನಿಧಿಧ್ಯಾ
ಸನದಿನ್+ಇವುಗಳನ್+ಒತ್ತಿ +ವಿದ್ಯಾ
ವಿನಯ +ಸೌಶೀಲ್ಯದಲಿ+ ನಡೆವುದು +ವಿಪ್ರ +ಕೇಳೆಂದ
ಅಚ್ಚರಿ:
(೧) ಮದವ – ೭ ಬಾರಿ ಪ್ರಯೋಗ
(೨) ಯಾವ ಮದವನ್ನು ಹೊರಗಿಡಬೇಕು – ಧನ, ಸತ್ಕುಲ, ಯೌವನ, ವಿದ್ಯ, ಪರಿಜನ, ವೈಭವ, ಆಚಾರಪದ