ಪದ್ಯ ೯: ಬ್ರಹ್ಮಚಾರಿಯನ್ನು ಎಲ್ಲಿಗೆ ಕರೆದೊಯ್ದನು?

ಬರಬರಲು ದೂರದಲಿ ವಿಪ್ರನ
ಬರವ ಕಂಡಿದಿರಾಗಿ ಬಂದುಪ
ಚರಿಸಿದನು ಬಂದೈ ಪತಿವ್ರತೆಯೆನ್ನ ದೂರಿದಳೆ
ಧರಣಿಯಮರೋತ್ತಮರಿಗಿದು ಸಂ
ಚರಣ ಯೋಗ್ಯಸ್ಥಾನವಲ್ಲಾ
ದರಿಸುವೊಡೆ ಬಾಯೆನುತ ತನ್ನಾಲಯಕೆ ಕೊಂಡೊಯ್ದ (ಅರಣ್ಯ ಪರ್ವ, ೧೬ ಸಂಧಿ, ೯ ಪದ್ಯ)

ತಾತ್ಪರ್ಯ:
ಬ್ರಹ್ಮಚಾರಿಯು ಬರುವುದನ್ನು ದೂರದಿಮ್ದ ನೋಡಿ ಧರ್ಮವ್ಯಾಧನು ಬ್ರಹ್ಮಚಾರಿಗೆ ಎದುರಾಗಿ ಬಂದು ಉಪಚರದ ಮಾತನ್ನಾಡಿ, ಪತಿವ್ರತೆಯು ನನ್ನ ಬಳಿಗೆ ಕಳಿಸಿದಳೇ? ಬಂದೆಯಾ? ಬ್ರಾಹ್ಮಣೋತ್ತಮರು ಸುಳಿದಾಡಲು ಇದು ಯೋಗ್ಯವಾದ ಜಾಗವಲ್ಲ, ಇಲ್ಲಿ ನಿನ್ನನ್ನು ಆದರಿಸಲು ಬರುವುದಿಲ್ಲ, ಎಂದು ಹೇಳಿ ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋದನು.

ಅರ್ಥ:
ಬರಬರಲು: ಹತ್ತಿರ ಆಗಮಿಸು; ದೂರ: ಅಂತರ; ವಿಪ್ರ: ಬ್ರಾಹ್ಮಣ; ಬರವ: ಆಗಮನ; ಕಂಡು: ನೋಡಿ; ಇದಿರಾಗು: ಎದುರು ಬಂದು; ಉಪಚರಿಸು: ಶುಶ್ರೂಷೆ, ನೋಡಿಕೊಳ್ಳು; ಪತಿವ್ರತೆ: ಗರತಿ; ದೂರು: ಕಳಿಸು; ಧರಣಿಯಮರ: ಬ್ರಾಹ್ಮಣ; ಉತ್ತಮ: ಶ್ರೇಷ್ಠ; ಸಂಚರಣ: ಓಡಾಟ; ಯೋಗ್ಯ: ಸರಿಯಾದ; ಸ್ಥಾನ: ಪ್ರದೇಶ; ಆದರಿಸು: ಗೌರವಿಸು; ಆಲಯ: ಮನೆ; ಕೊಂಡೊಯ್ದು: ಕರೆದುಕೊಂಡು ಹೋಗು;

ಪದವಿಂಗಡಣೆ:
ಬರಬರಲು +ದೂರದಲಿ +ವಿಪ್ರನ
ಬರವ+ ಕಂಡ್+ಇದಿರಾಗಿ +ಬಂದ್+ಉಪ
ಚರಿಸಿದನು +ಬಂದೈ +ಪತಿವ್ರತೆ+ಎನ್ನ +ದೂರಿದಳೆ
ಧರಣಿಯಮರ+ಉತ್ತಮರಿಗ್+ಇದು +ಸಂ
ಚರಣ+ ಯೋಗ್ಯಸ್ಥಾನವಲ್ಲ+
ಆದರಿಸುವೊಡೆ +ಬಾಯೆನುತ +ತನ್ನಾಲಯಕೆ +ಕೊಂಡೊಯ್ದ

ಅಚ್ಚರಿ:
(೧) ಬರವ, ಬರಬರಲು, ಬದು, ಬಂದೈ – ಪದಗಳ ಬಳಕೆ
(೨) ವಿಪ್ರ, ಧರಣಿಯಮರ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ