ಪದ್ಯ ೧೧: ಧರ್ಮವ್ಯಾಧನು ತನ್ನನ್ನು ಹೇಗೆ ಪರಿಚಯಿಸಿದನು?

ಇವರು ಮಾತಾಪಿತೃಗಳೆನ್ನಯ
ಯುವತಿಯಿವಳಿವನೆನ್ನ ಮಗನಿಂ
ತಿವರ ರಕ್ಷೆಗೆ ಬೇಂಟೆಯಾಡುವೆನಡವಿಯಡವಿಯಲಿ
ಕವಲುಗೋಲಲಿ ಮೃಗಗಣವ ಕೊಂ
ದವನು ತಗೆನಂಗಡಿಯಲವ ಮಾ
ರುವೆನು ಲೋಭವನಿಲ್ಲಿ ಮಾಡೆನು ವಿಪ್ರ ಕೇಳೆಂದ (ಅರಣ್ಯ ಪರ್ವ, ೧೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ಧರ್ಮವ್ಯಾಧನು ತನ್ನನ್ನು ಪರಿಚಯಿಸಿಕೊಳ್ಳುತ್ತಾ, ಎಲೈ ಬ್ರಹ್ಮಚಾರಿಯೇ, ಇವರೇ ನನ್ನ ತಂದೆ ತಾಯಿ, ಈಕೆ ನನ್ನ ಪತ್ನಿ, ಹಾಗು ಇವನು ನನ್ನ ಮಗ, ಇವರನ್ನು ಸಲಹಲು ನಾನು ಬೇಟೆಯಾಡುತ್ತೇನೆ, ಕಾಡು ಕಾಡಿನಲ್ಲಿ ಅಲೆದು ಮೃಗಗಳನ್ನು ಕೊಂದು ಅಂಗಡಿಗೆ ತಂದು ಮಾರುತ್ತೇನೆ, ಲೋಭ ಮಾಡುವುದಿಲ್ಲವೆಂದು ಹೇಳಿದನು.

ಅರ್ಥ:
ಮಾತ: ತಾಯಿ; ಪಿತೃ: ತಂದೆ; ಯುವತಿ: ಹೆಣ್ಣು; ಮಗ: ಸುತ; ರಕ್ಷೆ: ಕಾಪಾದು; ಬೇಂಟೆ: ಪ್ರಾಣಿಗಳನ್ನು ಕೊಲ್ಲುವ ಕ್ರೀಡೆ; ಅಡವಿ: ಕಾಡು; ಕವಲುಗೋಲು: ಬಾಣ; ಮೃಗ: ಪಶು, ಪ್ರಾಣಿ; ಗಣ: ಗುಂಪು; ಕೊಲ್ಲು: ಸಾಯಿಸು; ತಹೆ: ತಂದು; ಅಂಗಡಿ: ವಸ್ತುಗಳನ್ನು ಮಾರುವ ಸ್ಥಳ; ಮಾರುವೆ: ವಿಕ್ರಯಿಸು; ಲೋಭ: ದುರಾಸೆ; ವಿಪ್ರ: ಬ್ರಾಹ್ಮಣ;

ಪದವಿಂಗಡಣೆ:
ಇವರು +ಮಾತಾ+ಪಿತೃಗಳ್+ಎನ್ನಯ
ಯುವತಿ+ಇವಳ್+ಇವನೆನ್ನ +ಮಗನ್+ಇಂ
ತಿವರ+ ರಕ್ಷೆಗೆ +ಬೇಂಟೆಯಾಡುವೆನ್+ಅಡವಿ+ಅಡವಿಯಲಿ
ಕವಲುಗೋಲಲಿ+ ಮೃಗಗಣವ+ ಕೊಂದ್
ಅವನು +ತಗೆನ್+ಅಂಗಡಿಯಲ್+ಅವ+ ಮಾ
ರುವೆನು +ಲೋಭವನ್+ಇಲ್ಲಿ +ಮಾಡೆನು +ವಿಪ್ರ +ಕೇಳೆಂದ

ಅಚ್ಚರಿ:
(೧) ಪ್ರಾಣಿಯನ್ನು ಬೇಟೆಯಾಡುವ ಪರಿ – ಕವಲುಗೋಲಲಿ ಮೃಗಗಣವ ಕೊಂ
ದವನು ತಗೆನಂಗಡಿಯಲವ ಮಾರುವೆನು

ನಿಮ್ಮ ಟಿಪ್ಪಣಿ ಬರೆಯಿರಿ