ಪದ್ಯ ೩೪: ಭೂಮಿಗೆ ಅಧಿಪತಿಯಾರು?

ಆರಜೋಗುಣಕಬುಜಭವನ ವಿ
ಕಾರಿ ತನ್ನ ಶರೀರದರ್ಧವ
ನಾರಿಯನು ಮಾಡಿದನು ಶತರೂಪಾಭಿಧಾನದಲಿ
ಸೇರಿಸಿದನರ್ಧದಲಿ ಮನುವನು
ದಾರ ಚರಿತನು ಸಕಲ ಧರ್ಮದ
ಸಾರವನು ವಿಸ್ತರಿಸಿದನು ಮನು ಭುವನ ವಿಭುವಾಗಿ (ಅರಣ್ಯ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ರಜೋಗುಣದ ಬ್ರಹ್ಮನು ತನ್ನ ಶರೀರದ ಅರ್ಧದಿಂದ ಶತರೂಪೆಯನ್ನು ಸೃಷ್ಟಿಸಿದನು. ಇನ್ನರ್ಧದಿಂದ ಮನುವನ್ನು ಸೃಷ್ಟಿಸಿದನು. ಮನುವು ಭೂಮಿಗೆ ಅಧಿಪತಿಯಾಗಿ ಧರ್ಮವನ್ನು ವಿಸ್ತರಿಸಿದನು.

ಅರ್ಥ:
ರಜಸ್ಸು: ಮೂರು ಗುಣಗಳಲ್ಲಿ ಒಂದು; ಗುಣ: ನಡತೆ, ಸ್ವಭಾವ; ಅಬುಜಭವ: ಬ್ರಹ್ಮ; ವಿಕಾರ: ಬದಲಾವಣೆ, ಮಾರ್ಪಾಟು; ಶರೀರ: ದೇಹ; ಅರ್ಧ: ಒಂದರ ಎರಡನೇ ಭಾಗ; ನಾರಿ: ಹೆಣ್ಣು; ಶತ: ನೂರು; ರೂಪ: ಆಕಾರ; ಅಭಿಧಾನ: ಹೆಸರು; ಸೇರಿಸು: ಜೋಡಿಸು; ಮನು:ಮನುಷ್ಯ ಕುಲದ ಮೂಲಪುರುಷ; ಉದಾರ: ತ್ಯಾಗ ಬುದ್ಧಿಯುಳ್ಳವನು; ಚರಿತ: ನಡೆದುದು; ಸಕಲ: ಎಲ್ಲಾ; ಧರ್ಮ: ಧಾರಣೆ ಮಾಡಿದುದು; ಸಾರ: ರಸ; ವಿಸ್ತರ: ಹಬ್ಬುಗೆ, ವಿಸ್ತಾರ; ಭುವನ: ಲೋಕ, ಜಗತ್ತು; ವಿಭು:ಒಡೆಯ, ಅರಸು;

ಪದವಿಂಗಡಣೆ:
ಆ+ರಜೋಗುಣಕ್+ಅಬುಜಭವನ+ ವಿ
ಕಾರಿ +ತನ್ನ +ಶರೀರ್+ಅರ್ಧವ
ನಾರಿಯನು +ಮಾಡಿದನು +ಶತರೂಪ+ಅಭಿಧಾನದಲಿ
ಸೇರಿಸಿದನ್+ಅರ್ಧದಲಿ +ಮನುವನ್
ಉದಾರ +ಚರಿತನು +ಸಕಲ +ಧರ್ಮದ
ಸಾರವನು +ವಿಸ್ತರಿಸಿದನು+ ಮನು +ಭುವನ +ವಿಭುವಾಗಿ

ಅಚ್ಚರಿ:
(೧) ಮನುವಿನ ಕಾರ್ಯ – ಸೇರಿಸಿದನರ್ಧದಲಿ ಮನುವನುದಾರ ಚರಿತನು ಸಕಲ ಧರ್ಮದ ಸಾರವನು ವಿಸ್ತರಿಸಿದನು ಮನು ಭುವನ ವಿಭುವಾಗಿ

ನಿಮ್ಮ ಟಿಪ್ಪಣಿ ಬರೆಯಿರಿ