ಪದ್ಯ ೩೧: ಯಾವುದರಲ್ಲಿ ಯಾವುದು ಲೀನವಾಯಿತು?

ಆ ಮಹಾಜಲಕಗ್ನಿ ಮುಖದಲಿ
ಹೋಮವಾಯ್ತು ತದಗ್ನಿಯಡಗಿದು
ದಾಮರುತ್ತಿನಲಾ ಬಹಳ ಬಹಿರಾವರಣದಲಿ ಪವನ
ವ್ಯೋಮಕಾ ತದಹಂ ಮಹತ್ತು ವಿ
ರಾಮ ವಾ ಪ್ರಕೃತಿಯಲಿ ಮಾಯಾ
ಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ (ಅರಣ್ಯ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಂತರ ಆ ಮಹಾ ಜಲರಾಶಿಯು ಅಗ್ನಿಯಲ್ಲಿ ಹೋಮವಾಯಿತು, ಅಗ್ನಿಯು ವಾಯುವಿನಲ್ಲಿ, ವಾಯುವ ಆಕಾಶದಲ್ಲಿ, ಆಗಸವು ಅಹಂತತ್ತ್ವದಲ್ಲಿ, ಅಹಂ ತತ್ತ್ವವು ಮಹತತ್ತ್ವದಲ್ಲಿ ಮತ್ತು ಮಹತ್ತು ಮಾಯೆಯಲ್ಲಿ ಅಡಗಿತು, ಮಾಯೆಯು ಪರಮಾತ್ಮನಲ್ಲಿ ಲಯವಾಯಿತು ಎಂದು ಮಾರ್ಕಂಡೇಯ ಮುನಿಯು ವಿವರಿಸಿದನು.

ಅರ್ಥ:
ಮಹಾ: ದೊಡ್ಡ; ಜಲ: ನೀರು; ಅಗ್ನಿ: ಬೆಂಕಿ; ಮುಖ: ಆನನ; ಹೋಮ: ಯಜ್ಞ; ಅಡಗು: ಮರೆಯಾಗು, ಮುಚ್ಚು; ಮರುತ: ಗಾಳಿ; ಬಹಳ: ತುಂಬ; ಬಹಿರ: ಹೊರಗೆ; ಆವರಣ: ಮುಸುಕು, ಹೊದಿಕೆ; ಪವನ: ವಾಯು; ವ್ಯೋಮ: ಆಗಸ; ಅಹಂ: ಅಹಂಕಾರ; ಮಹತ್ತು: ಹಿರಿದು, ಶ್ರೇಷ್ಠವಾದುದು; ವಿರಾಮ: ಬಿಡುವು, ವಿಶ್ರಾಂತಿ; ಪ್ರಕೃತಿ: ನೈಜವಾದುದು; ಮಾಯ: ಗಾರುಡಿ, ಇಂದ್ರಜಾಲ;ಕಾಮಿನಿ: ಹೆಣ್ಣು; ಪರಮಾತ್ಮ: ಭಗವಮ್ತ; ಲಯ: ನಾಶ, ಲೀನ; ಮುನಿಪ: ಋಷಿ;

ಪದವಿಂಗಡಣೆ:
ಆ +ಮಹಾಜಲಕ್+ಅಗ್ನಿ+ ಮುಖದಲಿ
ಹೋಮವಾಯ್ತು +ತದಗ್ನಿ+ಅಡಗಿದುದ್
ಆ+ಮರುತ್ತಿನಲ್+ಆ+ಬಹಳ+ ಬಹಿರಾವರಣದಲಿ +ಪವನ
ವ್ಯೋಮಕ+ಆ+ ತದ್+ಅಹಂ+ ಮಹತ್ತು+ ವಿ
ರಾಮ+ ವಾ +ಪ್ರಕೃತಿಯಲಿ+ ಮಾಯಾ
ಕಾಮಿನಿಗೆ +ಪರಮಾತ್ಮನಲಿ+ ಲಯವೆಂದನಾ+ ಮುನಿಪ

ಅಚ್ಚರಿ:
(೧) ಮಾಯಯು ಅಡಗಿದ ಪರಿ – ಮಾಯಾಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ

ನಿಮ್ಮ ಟಿಪ್ಪಣಿ ಬರೆಯಿರಿ