ಪದ್ಯ ೨೪: ಮುನಿಗಳು ಮರಣ ಸಮಯದಲ್ಲಿ ಯಾರನ್ನು ನೆನೆದರು?

ಹೇಳಲೇನದು ಮೃತ್ಯುವಿನ ಗೋ
ನಾಳಿಯೊಳಗಂದಿಳಿಯಲೊಲ್ಲದೆ
ಕಾಳು ಮಾಡಿದೆನೇ ಮುರಾರಿಯ ಭಜಿಸಿ ಭಕ್ತಿಯಲಿ
ಬಾಲಕನೊಳವಗುಣವನಕಟಾ
ತಾಲಬಹುದೇ ತಾಯೆ ಮೃತ್ಯುವೆ
ತಾಳಿಗೆಯ ತೆಗೆದೆನ್ನನೊಳಕೊಳ್ಲೆಂದು ಹಲುಬಿದೆನು (ಅರಣ್ಯ ಪರ್ವ, ೧೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮಾರ್ಕಂಡೇಯ ಮುನಿಗಳು ವಿವರಿಸುತ್ತಾ, ಆಗ ನಾನು ಮರಣಕಾಲ ಬಂದಾಗ ಶ್ರೀ ಹರಿಯನ್ನು ಭಕ್ತಿಯಿಂದ ಭಜಿಸಿ ಮೃತ್ಯುವಿನ ಬಾಯಲ್ಲಿ ಸಿಕ್ಕಿದುದನ್ನು ಏಕಾದರೂ ತಪ್ಪಿಸ್ಕೊಂಡೆನೋ ಏನೋ ತಾಯೇ ಮೃತ್ಯುವೇ ನನ್ನಲ್ಲಿನ್ನು ಅವಗುಣವನ್ನು ಕಂಡು ಏಕೆ ಕುಪಿತಳಾದ ಈಗಲೂ ಬಾಯ್ತೆರೆದು ನನ್ನನ್ನು ನುಂಗು ಎಂದೆನು.

ಅರ್ಥ:
ಹೇಳು: ತಿಳಿಸು; ಮೃತ್ಯು: ಮರಣ; ಗೋನಾಳಿ: ಕುತ್ತಿಗೆಯ ನಾಳ; ಇಳಿ: ಕೆಳಕ್ಕೆ ಬೀಳು; ಒಲ್ಲದೆ: ಬಯಸದೆ; ಕಾಳು: ಕೆಟ್ಟದ್ದು, ಕೀಳಾದುದು; ಮಾಡು: ಆಚರಿಸು; ಭಜಿಸು: ಆರಾಧಿಸು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಬಾಲಕ: ಪುತ್ರ; ಅವಗುಣ: ದುರ್ಗುಣ, ದೋಷ; ಅಕಟ: ಅಯ್ಯೋ; ತಾಳು: ಸಹಿಸು; ತಾಯೆ: ಮಾತೆ; ಮೃತ್ಯು: ಸಾವು; ತಾಳು: ಹೊಂದು, ಪಡೆ; ತೆಗೆ: ಹೊರತರು; ಒಳಕೊಳ್ಳು: ಸೇರಿಸು; ಹಲುಬು: ದುಃಖಪಡು, ಬೇಡಿಕೋ;

ಪದವಿಂಗಡಣೆ:
ಹೇಳಲೇನ್+ಅದು+ ಮೃತ್ಯುವಿನ+ ಗೋ
ನಾಳಿಯೊಳಗ್+ಅಂದ್+ಇಳಿಯಲ್+ಒಲ್ಲದೆ
ಕಾಳು +ಮಾಡಿದೆನೇ +ಮುರಾರಿಯ +ಭಜಿಸಿ +ಭಕ್ತಿಯಲಿ
ಬಾಲಕನೊಳ್+ಅವಗುಣವನ್+ಅಕಟಾ
ತಾಳಬಹುದೇ +ತಾಯೆ +ಮೃತ್ಯುವೆ
ತಾಳಿಗೆಯ +ತೆಗೆದ್+ಎನ್ನನ್+ಒಳಕೊಳ್ಳೆಂದು +ಹಲುಬಿದೆನು

ಅಚ್ಚರಿ:
(೧) ಮೃತ್ಯುವನ್ನು ಆಹ್ವಾನಿಸುವ ಪರಿ – ಮೃತ್ಯುವೆ ತಾಳಿಗೆಯ ತೆಗೆದೆನ್ನನೊಳಕೊಳ್ಲೆಂದು ಹಲುಬಿದೆನು

ನಿಮ್ಮ ಟಿಪ್ಪಣಿ ಬರೆಯಿರಿ