ಪದ್ಯ ೨೩: ಯಾವುದರಲ್ಲಿ ಎಲ್ಲವೂ ಮುಳುಗಿತ್ತು?

ಈ ನೆಲನನೀ ಚಂದ್ರ ಸೂರ್ಯ ಕೃ
ಶಾನು ತೇಜವನೀ ಸಮೀರಣ
ನೀನಭವ ನಾ ಕಾಣೆನೊಂದೇ ಸಲಿಲ ಸೃಷ್ಟಿಯಲಿ
ಏನು ಹೇಳುವೆನೆನ್ನ ಚಿತ್ತ
ಗ್ಲಾನಿಯನು ಬಲುತೆರೆಯ ಹೊಯ್ಲಿನೊ
ಳಾನು ಮುಳುಗುತ್ತೇಳುತಿರ್ದೆನು ಭೂಪ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯುಧಿಷ್ಥಿರ ಕೇಳು, ಈ ಭೂಮಿ, ಸೂರ್ಯ, ಚಂದ್ರ, ಅಗ್ನಿ, ವಾಯು, ಆಕಾಶಗಳೊಂದೂ ಆ ನೀರಿನ ದೆಸೆಯಿಂದ ಕಾಣಲಿಲ್ಲ. ನನ್ನ ಚಿತ್ತದ ಚಿಂತೆಯನ್ನು ಏನೆಂದು ಹೇಳಲಿ, ಆ ನೀರಿನಲ್ಲಿ ಮುಳುಗುತ್ತಾ ಏಳುತ್ತಾ ನಾನು ಸಂಕಟ ಪದುತ್ತಿದ್ದೆನು ಹಲುಬುತ್ತಿದ್ದೆನು ಎಂದು ಮುನಿಗಳು ತಿಳಿಸಿದರು.

ಅರ್ಥ:
ನೆಲ: ಭೂಮಿ; ಚಂದ್ರ: ಶಶಿ; ಸೂರ್ಯ: ರವಿ; ಕೃಶಾನು: ಅಗ್ನಿ, ಬೆಂಕಿ; ತೇಜ: ಕಾಂತಿ, ಪ್ರಕಾಶ; ಸಮೀರ: ವಾಯು; ಕಾಣು: ತೋರು; ಸಲಿಲ: ಜಲ; ಸೃಷ್ಟಿ: ಉತ್ಪತ್ತಿ, ಹುಟ್ಟು; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ, ದಣಿವು; ಬಲು: ಬಹಳ; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ಹೊಯ್ಲು: ಏಟು, ಹೊಡೆತ; ಮುಳುಗು: ಮಿಂದು; ಏಳು: ಮೇಲೇಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಈ +ನೆಲನನ್+ಈ+ ಚಂದ್ರ +ಸೂರ್ಯ +ಕೃ
ಶಾನು +ತೇಜವನ್+ಈ+ ಸಮೀರಣನ್
ಈ+ನಭವ+ ನಾ+ ಕಾಣೆನ್+ಒಂದೇ +ಸಲಿಲ+ ಸೃಷ್ಟಿಯಲಿ
ಏನು +ಹೇಳುವೆನ್+ಎನ್ನ +ಚಿತ್ತ
ಗ್ಲಾನಿಯನು +ಬಲುತೆರೆಯ+ ಹೊಯ್ಲಿನೊಳ್
ಆನು+ ಮುಳುಗುತ್+ಏಳುತಿರ್ದೆನು+ ಭೂಪ +ಕೇಳೆಂದ

ಅಚ್ಚರಿ:
(೧) ಪಂಚಭೂತಗಳು ನೀರಿನಲ್ಲಿ ಮುಳುಗಿದವು ಎಂದು ಹೇಳುವ ಪರಿ – ಈ ನೆಲನನೀ ಚಂದ್ರ ಸೂರ್ಯ ಕೃಶಾನು ತೇಜವನೀ ಸಮೀರಣ ನೀನಭವ ನಾ ಕಾಣೆನೊಂದೇ ಸಲಿಲ ಸೃಷ್ಟಿಯಲಿ

ನಿಮ್ಮ ಟಿಪ್ಪಣಿ ಬರೆಯಿರಿ