ಪದ್ಯ ೨೧: ಲೋಕಗಳನ್ನು ಯಾರು ಸೃಷ್ಟಿಸುತ್ತಾರೆ?

ಮರಳಿ ಹೂಡಿದನೀಜಗದ ವಿ
ಸ್ತರಣವನು ಮಾಯಾ ಮಹೋದಧಿ
ಹೊರೆದನುನ್ನತ ಸತ್ವದಲಿ ಮೇಲಾದ ಲೋಕಗಳ
ಉರಿಯಲದ್ದುವನಿವನು ಲೀಲಾ
ಚರಿತವಿದು ಕೃಷ್ಣಂಗೆ ನಿನ್ನಯ
ಸಿರಿಯ ಸಿರಿ ಬಡತನವೆ ಬಡತನವೆಂದನಾ ಮುನಿಪ (ಅರಣ್ಯ ಪರ್ವ, ೧೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ತನ್ನ ಮಾಯಾಸಾಗರದಲ್ಲಿ ಮತ್ತೆ ಈ ಲೋಕಗಲನ್ನು ಅಣಿಮಾಡಿ ಸೃಷ್ಟಿಸಿದನು. ಈ ಲೋಕವನ್ನು ಮಹಾಸತ್ವನಾದ ಇವನು ಕಾಪಾಡುತ್ತಾನೆ. ಮತ್ತೆ ಸುಟ್ಟು ಹಾಕುತ್ತಾನೆ. ಇದು ಕೃಷ್ಣನ ಲೀಲೆ ಮತ್ತು ಆಚರಣೆ, ನಿನ್ನ ಕರ್ಮದ ದೆಸೆಯಿಂದಾಗುವ ಸಂಪತ್ತೇ ಸಂಪತ್ತು, ಮತ್ತು ಬಡತನವೇ ಬಡತನ ಆದರೆ ಕೃಷ್ಣನಿಗೆ ಕರ್ಮದ ಲೇಪವಿಲ್ಲ ಎಂದು ವೈಶಂಪಾಯನರು ಜನಮೇಜಯನಿಗೆ ಹೇಳಿದರು.

ಅರ್ಥ:
ಮರಳಿ: ಮತ್ತೆ; ಹೂಡು: ಅಣಿಗೊಳಿಸು; ಜಗ: ಜಗತ್ತು, ಪ್ರಪಂಚ; ವಿಸ್ತರಣ: ವಿಶಾಲ; ಮಾಯ: ಗಾರುಡಿ, ಇಂದ್ರಜಾಲ; ಮಹಾ: ದೊಡ್ಡ; ಉದಧಿ: ಸಾಗರ; ಹೊರೆ: ರಕ್ಷಣೆ, ಆಶ್ರಯ; ಉನ್ನತ: ಹೆಚ್ಚಿನ; ಸತ್ವ: ಶಕ್ತಿ, ಸಾರ; ಲೋಕ: ಜಗತ್ತು; ಉರಿ: ಸುಡು; ಅದ್ದು: ಮುಳುಗಿಸು; ಲೀಲೆ: ಆನಂದ, ಸಂತೋಷ; ಚರಿತ: ನಡೆದುದು, ಗತಿ; ಸಿರಿ: ಐಶ್ವರ್ಯ; ಬಡತನ: ಕೊರತೆ, ಅಭಾವ; ಮುನಿ: ಋಷಿ;

ಪದವಿಂಗಡಣೆ:
ಮರಳಿ +ಹೂಡಿದನ್+ಈ+ಜಗದ +ವಿ
ಸ್ತರಣವನು +ಮಾಯಾ +ಮಹಾ+ಉದಧಿ
ಹೊರೆದನ್+ಉನ್ನತ +ಸತ್ವದಲಿ +ಮೇಲಾದ +ಲೋಕಗಳ
ಉರಿಯಲ್+ಅದ್ದುವನ್+ಇವನು +ಲೀಲಾ
ಚರಿತವಿದು+ ಕೃಷ್ಣಂಗೆ +ನಿನ್ನಯ
ಸಿರಿಯ +ಸಿರಿ +ಬಡತನವೆ+ ಬಡತನವ್+ಎಂದನಾ +ಮುನಿಪ

ಅಚ್ಚರಿ:
(೧) ಕೃಷ್ಣನ ಲೀಲೆ – ಉರಿಯಲದ್ದುವನಿವನು ಲೀಲಾಚರಿತವಿದು ಕೃಷ್ಣಂಗೆ

ನಿಮ್ಮ ಟಿಪ್ಪಣಿ ಬರೆಯಿರಿ