ಪದ್ಯ ೧೪: ಕೃಷ್ಣನು ಧರ್ಮಜನಿಗೆ ಏನು ಹೇಳಿದನು?

ಏಳೆನುತ ತೆಗೆದಪ್ಪಿದನು ಕರು
ಣಾಳು ಕೇಳೈ ಭೂಪ ಸುರಪತಿ
ಯಾಲಯದೊಳೂರ್ವಶಿಯ ಶಾಪವು ಬಂದೊಡೇನಾಯ್ತು
ಲೀಲೆಯಿಂದೀ ಭೀಮ ದೈತ್ಯರ
ಭಾಲಲಿಪಿಯನು ತೊಡೆದ ನಿನ್ನಯ
ಬಾಳು ಬರಹವು ಮುಂದೆಯೆಂದನು ನಗುತ ಮುರವೈರಿ (ಅರಣ್ಯ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕರುಣಾಳವಾದ ಶ್ರೀಕೃಷ್ನನು ಧರ್ಮನಂದನನ್ನು ಏಳು ಎಂದು ಹೇಳಿ ಅವನನ್ನು ಆಲಂಗಿಸಿಕೊಂಡು ನಗುತ್ತಾ, ಅರ್ಜುನನಿಗೆ ಊರ್ವಶಿಯ ಶಾಪ ಬಂದರೇನಂತೆ? ಭೀಮನು ರಾಕ್ಷಸರನ್ನು ಸಂಹರಿಸಿದನಷ್ಟೇ, ಮುಂದೆ ನಿನ್ನ ಜೀವನಯನ್ನು ನೋಡು ಎಂದನು.

ಅರ್ಥ:
ಏಳು: ಮೇಲೆ ಬಾ; ಅಪ್ಪು: ಆಲಿಂಗಿಸು; ಕರುಣಾಳು: ದಯೆಯುಳ್ಳವನು; ಭೂಪ: ರಾಜ; ಸುರಪತಿ: ಇಂದ್ರ; ಆಲಯ: ಮನೆ; ಶಾಪ: ನಿಷ್ಠುರದ ನುಡಿ; ಲೀಲೆ: ಆಟ, ಕ್ರೀಡೆ; ದೈತ್ಯ: ರಾಕ್ಷಸ; ಭಾಳಲಿಪಿ: ಹಣೆಬರಹ; ತೊಡೆ: ಅಳಿಸು, ಒರಸು; ಬಾಳು: ಜೀವನ; ಬರಹ: ಲಿಖಿತ; ನಗು: ಸಂತಸ; ಮುರವೈರಿ: ಕೃಷ್ಣ;

ಪದವಿಂಗಡಣೆ:
ಏಳೆನುತ +ತೆಗೆದಪ್ಪಿದನು +ಕರು
ಣಾಳು +ಕೇಳೈ +ಭೂಪ +ಸುರಪತಿ
ಆಲಯದೊಳ್+ಊರ್ವಶಿಯ +ಶಾಪವು +ಬಂದೊಡೇನಾಯ್ತು
ಲೀಲೆಯಿಂದೀ+ ಭೀಮ +ದೈತ್ಯರ
ಭಾಳಲಿಪಿಯನು +ತೊಡೆದ +ನಿನ್ನಯ
ಬಾಳು +ಬರಹವು +ಮುಂದೆ+ಎಂದನು +ನಗುತ +ಮುರವೈರಿ

ಅಚ್ಚರಿ:
(೧) ಭಾಳಲಿಪಿ, ಬಾಳುಬರಹ – ಹಣೆಬರಹ, ಜೀವನ ಬರಹ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ