ಪದ್ಯ ೧೧: ಭೀಮಾರ್ಜುನರ ಸಾಹಸವನ್ನು ಧರ್ಮಜನು ಹೇಗೆ ತಿಳಿಸಿದನು?

ತೊಳಲಿದೆವಲಾ ಕೃಷ್ಣ ತಪ್ಪದೆ
ಹಳುವ ಹಳುವವನಮರಪುರದಲಿ
ಕೆಲವು ದಿನವಿರಲರ್ಜುನಂಗಾಯ್ತೂರ್ವಶಿಯ ಶಾಪ
ಖಳರನಲ್ಲಿ ನಿವಾತಕವಚರ
ಗೆಲಿದು ಬಂದನು ಪಾರ್ಥನದರೊಳು
ಕೆಲಬರಸುರರ ಕಾದಿಕೊಂದನು ಭೀಮನಡವಿಯಲಿ (ಅರಣ್ಯ ಪರ್ವ, ೧೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೃಷ್ಣ ಒಂದಾದ ಮೇಲೊಂದು ಹಲವು ಕಾಡುಗಳಲ್ಲಿ ನಾವು ಅಲೆದೆವು. ಅರ್ಜುನನು ಪಾಶುಪತಾಸ್ತ್ರವನ್ನು ಪಡೆದ ಮೇಲೆ ಕಾಲಕೇಯನಿವಾತ ಕವಚರನ್ನು ಸಂಹರಿಸಿದನು. ಅವನಿಗೆ ಊರ್ವಶಿಯು ಶಾಪವನ್ನು ನೀಡಿದಳು, ಇಲ್ಲಿ ಭೀಮನು ಅನೇಕ ರಾಕ್ಷಸರನ್ನು ಸಂಹರಿಸಿದನು.

ಅರ್ಥ:
ತೊಳಲು: ಬವಣೆ, ಸಂಕಟ; ಹಳುವ: ಕಾಡು; ಅಮರಪುರ: ಸ್ವರ್ಗ; ಕೆಲವು: ಸ್ವಲ್ಪ; ದಿನ: ದಿವಸ; ಶಾಪ: ನಿಷ್ಠುರದ ನುಡಿ; ಖಳ: ದುಷ್ಟ; ಗೆಲುವು: ಜಯ; ಅಸುರ: ರಾಕ್ಷಸ; ಕಾದು: ಹೋರಾಡು; ಕೊಂದು: ಸಾಯಿಸು; ಅಡವಿ: ಕಾಡು;

ಪದವಿಂಗಡಣೆ:
ತೊಳಲಿದೆವಲಾ+ ಕೃಷ್ಣ +ತಪ್ಪದೆ
ಹಳುವ+ ಹಳುವ್+ಅವನ್+ಅಮರಪುರದಲಿ
ಕೆಲವು +ದಿನವಿರಲ್+ಅರ್ಜುನಂಗಾಯ್ತ್+ಊರ್ವಶಿಯ +ಶಾಪ
ಖಳರನಲ್ಲಿ +ನಿವಾತಕವಚರ
ಗೆಲಿದು +ಬಂದನು +ಪಾರ್ಥನ್+ಅದರೊಳು
ಕೆಲಬರ್+ಅಸುರರ +ಕಾದಿಕೊಂದನು+ ಭೀಮನ್+ಅಡವಿಯಲಿ

ಅಚ್ಚರಿ:
(೧) ಪದರಚನೆ – ಹಳುವವನಮರಪುರದಲಿ

ನಿಮ್ಮ ಟಿಪ್ಪಣಿ ಬರೆಯಿರಿ