ಏಳೆನುತ ತೆಗೆದಪ್ಪಿದನು ಕರು
ಣಾಳು ಕೇಳೈ ಭೂಪ ಸುರಪತಿ
ಯಾಲಯದೊಳೂರ್ವಶಿಯ ಶಾಪವು ಬಂದೊಡೇನಾಯ್ತು
ಲೀಲೆಯಿಂದೀ ಭೀಮ ದೈತ್ಯರ
ಭಾಲಲಿಪಿಯನು ತೊಡೆದ ನಿನ್ನಯ
ಬಾಳು ಬರಹವು ಮುಂದೆಯೆಂದನು ನಗುತ ಮುರವೈರಿ (ಅರಣ್ಯ ಪರ್ವ, ೧೫ ಸಂಧಿ, ೧೪ ಪದ್ಯ)
ತಾತ್ಪರ್ಯ:
ಕರುಣಾಳವಾದ ಶ್ರೀಕೃಷ್ನನು ಧರ್ಮನಂದನನ್ನು ಏಳು ಎಂದು ಹೇಳಿ ಅವನನ್ನು ಆಲಂಗಿಸಿಕೊಂಡು ನಗುತ್ತಾ, ಅರ್ಜುನನಿಗೆ ಊರ್ವಶಿಯ ಶಾಪ ಬಂದರೇನಂತೆ? ಭೀಮನು ರಾಕ್ಷಸರನ್ನು ಸಂಹರಿಸಿದನಷ್ಟೇ, ಮುಂದೆ ನಿನ್ನ ಜೀವನಯನ್ನು ನೋಡು ಎಂದನು.
ಅರ್ಥ:
ಏಳು: ಮೇಲೆ ಬಾ; ಅಪ್ಪು: ಆಲಿಂಗಿಸು; ಕರುಣಾಳು: ದಯೆಯುಳ್ಳವನು; ಭೂಪ: ರಾಜ; ಸುರಪತಿ: ಇಂದ್ರ; ಆಲಯ: ಮನೆ; ಶಾಪ: ನಿಷ್ಠುರದ ನುಡಿ; ಲೀಲೆ: ಆಟ, ಕ್ರೀಡೆ; ದೈತ್ಯ: ರಾಕ್ಷಸ; ಭಾಳಲಿಪಿ: ಹಣೆಬರಹ; ತೊಡೆ: ಅಳಿಸು, ಒರಸು; ಬಾಳು: ಜೀವನ; ಬರಹ: ಲಿಖಿತ; ನಗು: ಸಂತಸ; ಮುರವೈರಿ: ಕೃಷ್ಣ;
ಪದವಿಂಗಡಣೆ:
ಏಳೆನುತ +ತೆಗೆದಪ್ಪಿದನು +ಕರು
ಣಾಳು +ಕೇಳೈ +ಭೂಪ +ಸುರಪತಿ
ಆಲಯದೊಳ್+ಊರ್ವಶಿಯ +ಶಾಪವು +ಬಂದೊಡೇನಾಯ್ತು
ಲೀಲೆಯಿಂದೀ+ ಭೀಮ +ದೈತ್ಯರ
ಭಾಳಲಿಪಿಯನು +ತೊಡೆದ +ನಿನ್ನಯ
ಬಾಳು +ಬರಹವು +ಮುಂದೆ+ಎಂದನು +ನಗುತ +ಮುರವೈರಿ
ಅಚ್ಚರಿ:
(೧) ಭಾಳಲಿಪಿ, ಬಾಳುಬರಹ – ಹಣೆಬರಹ, ಜೀವನ ಬರಹ – ಪದಗಳ ಬಳಕೆ