ಪದ್ಯ ೯: ಕೃಷ್ಣನು ಧರ್ಮಜನಿಗೆ ಏನು ಹೇಳಿದನು?

ಕುಶಲವೇ ಕುರುರಾಯನೂಳಿಗ
ವೆಸಕದಲೆ ನಿಮ್ಮತ್ತಲವಧಿಯ
ದೆಸೆ ಸಮೀಪವೆ ತೊಳಲಿದಿರೆಲಾ ವನವನಂಗಳಲಿ
ಪಶುಪತಿಯು ಹಿಡಿವಂಬು ಕೈವ
ರ್ತಿಸಿತಲಾ ಪಾರ್ಥಂಗೆ ನಮಗಿಂ
ದೊಸಗೆಯಾಯಿತು ಪುಣ್ಯವೆಂದನು ಹರಿ ಮಹೀಪತಿಗೆ (ಅರಣ್ಯ ಪರ್ವ, ೧೫ ಸಂಧಿ, ೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪಾಂಡವರನ್ನು ನೋಡಿ, ನೀವು ಕುಶಲವೇ, ಕೌರವನ ಆಟೋಪವು ನಿಮ್ಮ ಮೇಲೆ ಉಪಟಳ ಮಾಡುತ್ತಿಲ್ಲವೆ? ವನವಾಸದ ಅವಧಿಯು ತೀರುತ್ತಾ ಬಂದಿತೇ? ಕಾಡು ಮೇಡುಗಳಲ್ಲಿ ಅಲೆದಾಡಿದಿರಲ್ಲವೇ? ಶಿವನ ಬಾಣವು ಅರ್ಜುನನಿಗೆ ವಶವಾಯಿತಲ್ಲವೇ? ನಿಮ್ಮನ್ನು ನೋಡಿದ ಈ ಗಳಿಗೆ ನಮಗೆ ಶುಭಕರವಾಯಿತು ಎಂದು ಹೇಳಿ ಧರ್ಮಜನನ್ನು ಆಲಿಂಗಿಸಿಕೊಂಡನು.

ಅರ್ಥ:
ಕುಶಲ: ಕ್ಷೇಮ; ಊಳಿಗ: ಕೆಲಸ, ಕಾರ್ಯ; ಎಸಕ: ಕೆಲಸ, ಕಾಂತಿ; ಅವಧಿ: ಗಡು, ಸಮಯದ ಪರಿಮಿತಿ; ದೆಸೆ: ದಿಕ್ಕು; ಸಮೀಪ: ಹತ್ತಿರ; ತೊಳಲು: ಅಲೆದಾಡು, ತಿರುಗಾಡು; ವನ: ಕಾಡು; ಪಶುಪತಿ: ಶಂಕರ; ಅಂಬು: ಬಾಣ; ಕೈವರ್ತಿಸು: ವಶವಾಯಿತು; ಒಸಗೆ: ಶುಭ; ಪುಣ್ಯ: ಸದಾಚಾರ; ಹರಿ: ಕೃಷ್ಣ; ಮಹೀಪತಿ: ರಾಜ;

ಪದವಿಂಗಡಣೆ:
ಕುಶಲವೇ+ ಕುರುರಾಯನ್+ಊಳಿಗವ್
ಎಸಕದಲೆ+ ನಿಮ್ಮತ್ತಲ್+ಅವಧಿಯ
ದೆಸೆ +ಸಮೀಪವೆ +ತೊಳಲಿದಿರೆಲಾ +ವನವನಂಗಳಲಿ
ಪಶುಪತಿಯು +ಹಿಡಿವ್+ಅಂಬು +ಕೈವ
ರ್ತಿಸಿತಲಾ +ಪಾರ್ಥಂಗೆ +ನಮಗಿಂದ್
ಒಸಗೆಯಾಯಿತು +ಪುಣ್ಯವೆಂದನು +ಹರಿ +ಮಹೀಪತಿಗೆ

ಅಚ್ಚರಿ:
(೧) ಕೃಷ್ಣನ ಸರಳತೆ: ನಮಗಿಂದೊಸಗೆಯಾಯಿತು ಪುಣ್ಯವೆಂದನು ಹರಿ ಮಹೀಪತಿಗೆ

ನಿಮ್ಮ ಟಿಪ್ಪಣಿ ಬರೆಯಿರಿ