ಪದ್ಯ ೫: ಯಾರ ಆಗಮನವನ್ನು ದೂತ ತಿಳಿಸಿದನು?

ಇದಕೆ ಕೃಷ್ಣಾಗಮನವೇ ಫಲ
ದುದಯ ವೈಸಲೆಯೆನುತಲಿರೆ ಬಂ
ದಿದಿರೆ ನಿಂದನು ದೂತನಮಲ ದ್ವಾರಕಾಪುರದ
ಇದೆ ಕೃಪಾನಿಧಿಬಂದನಸುರಾ
ಭ್ಯುದಯ ಘಾತಕ ಬಂದ ರಿಪುಬಲ
ಮದನಮದಹರ ಬಂದನಿದೆಯೆಮ್ದನು ಮಹೀಪತಿಗೆ (ಅರಣ್ಯ ಪರ್ವ, ೧೫ ಸಂಧಿ, ೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಆಗಮನವನ್ನೇ ಈ ಶುಭಶಕುನಗಳೂ ಸೂಚಿಸುತ್ತಿರಬೇಕು ಎಂದುಕೊಳ್ಳುತ್ತಿರುವಾಗ, ದ್ವಾರಕೆಯಿಮ್ದ ದೂತನೊಬ್ಬನು ಬಂದು ಯುಧಿಷ್ಠಿರನ ಸಮ್ಮುಖದಲ್ಲಿ ನಿಂತನು. ಇದೋ ಕೃಪಾನಿಧಿ ಶ್ರೀಕೃಷ್ಣನು ಬಂದನು, ರಾಕ್ಷಸರ ಅಭ್ಯುದಯವನ್ನು ಮುರಿಯುವವನು ಬಂದನು, ಶತ್ರುಗಳೆಂಬ ಮನ್ಮಥನ ಮದವನ್ನು ದಹಿಸುವ ಶಿವನು ಬಂದನು ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ಆಗಮನ: ಬರುವಿಕೆ; ಫಲ: ಪ್ರಯೋಜನ; ಉದಯ: ಹುಟ್ಟು; ಐಸಲೆ: ಅಲ್ಲವೆ; ಬಂದು: ಆಗಮನ; ಇದಿರು: ಎದುರು; ನಿಂದನು: ನಿಲ್ಲು; ದೂತ: ಸೇವಕ; ಅಮಲ: ನಿರ್ಮಲ; ಪುರ: ಊರು; ಕೃಪಾನಿಧಿ: ಕರುಣಾಸಾಗರ; ಅಸುರ: ರಾಕ್ಷಸ; ಅಭ್ಯುದಯ: ಏಳಿಗೆ; ಘಾತ: ಹೊಡೆತ, ಪೆಟ್ಟು; ರಿಪು: ವೈರಿ; ಬಲ: ಶಕ್ತಿ; ಮದನ: ಮನ್ಮಥ; ಮದ: ಅಹಂಕಾರ; ಹರ: ಶಿವ; ಮಹೀಪತಿ: ರಾಜ;

ಪದವಿಂಗಡಣೆ:
ಇದಕೆ +ಕೃಷ್ಣಾಗಮನವೇ +ಫಲವ್
ಉದಯವ್ + ಐಸಲೆ+ಎನುತಲಿರೆ+ ಬಂದ್
ಇದಿರೆ +ನಿಂದನು +ದೂತನ್+ಅಮಲ +ದ್ವಾರಕಾಪುರದ
ಇದೆ+ ಕೃಪಾನಿಧಿ+ಬಂದನ್+ಅಸುರ
ಅಭ್ಯುದಯ +ಘಾತಕ +ಬಂದ +ರಿಪು+ಬಲ
ಮದನ+ಮದ+ಹರ +ಬಂದನಿದೆ+ಎಂದನು +ಮಹೀಪತಿಗೆ

ಅಚ್ಚರಿ:
(೧) ಕೃಷ್ಣನ ವರ್ಣನೆ – ಕೃಪಾನಿಧಿಬಂದನಸುರಾಭ್ಯುದಯ ಘಾತಕ ಬಂದ ರಿಪುಬಲ
ಮದನಮದಹರ ಬಂದನಿದೆಯೆಮ್ದನು ಮಹೀಪತಿಗೆ

ನಿಮ್ಮ ಟಿಪ್ಪಣಿ ಬರೆಯಿರಿ