ಆ ಶರತ್ಕಾಲವನು ತದ್ವನ
ವಾಸದಲಿ ನೂಕಿದನು ಘನ ಪರಿ
ತೋಷ ಸೂಚಕ ಶಕುನವಂಗಸ್ಫುರಣೆ ಮೊದಲಾದ
ಮೀಸಲಳಿಯದ ಹರುಷರಸದಾ
ವೇಶದಲಿ ಮನವುಕ್ಕಿ ಹಿಗ್ಗಿದ
ನೀ ಶಕುನ ಸುಮ್ಮಾನವಿದಕೇನಹುದು ಫಲವೆಂದ (ಅರಣ್ಯ ಪರ್ವ, ೧೫ ಸಂಧಿ, ೪ ಪದ್ಯ)
ತಾತ್ಪರ್ಯ:
ಕಾಮ್ಯಕವನದಲ್ಲೇ ಶರತ್ಕಾಲವು ಕಳೆಯಿತು. ಆಗ ಯುಧಿಷ್ಠಿರನಿಗೆ ಶುಭಶಕುನ ಅಂಗಸ್ಫುರಣೆ (ಬಲಭುಜ, ಬಲಗಣ್ಣು ಅದಿರುವುದು) ಗಳಾಗಲು ಅವನಿಗೆ ಅತೀವ ಸಂತೋಷವಾಯಿತು, ಈ ಶುಭ ಶಕುನಕ್ಕೇನು ಫಲ ಎಂದು ಯೋಚಿಸಿದನು.
ಅರ್ಥ:
ಕಾಲ: ಸಮಯ; ವನ: ಕಾಡು; ವಾಸ: ಸ್ಥಾನ; ನೂಕು: ತಳ್ಳು; ಘನ: ಶ್ರೇಷ್ಠ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ; ಸೂಚಕ: ಸುಳಿವು, ಸೂಚನೆ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಅಂಗ: ದೇಹದ ಭಾಗ; ಸ್ಫುರಣ: ನಡುಗುವುದು; ಮೀಸಲು: ಮುಡಿಪು; ಅಳಿ:ನಾಶ; ಹರುಷ: ಸಂತಸ; ರಸ: ಸಾರ; ಆವೇಶ: ಆಗ್ರಹ; ಮನ: ಮನಸ್ಸು; ಉಕ್ಕು: ಹಿಗ್ಗುವಿಕೆ; ಸುಮ್ಮಾನ: ಸುಮನ, ಸಂತಸ; ಫಲ: ಪ್ರಯೋಜನ;
ಪದವಿಂಗಡಣೆ:
ಆ +ಶರತ್ಕಾಲವನು + ತದ್+ವನ
ವಾಸದಲಿ +ನೂಕಿದನು+ ಘನ +ಪರಿ
ತೋಷ +ಸೂಚಕ +ಶಕುನವ್+ಅಂಗಸ್ಫುರಣೆ+ ಮೊದಲಾದ
ಮೀಸಲ್+ಅಳಿಯದ +ಹರುಷ+ರಸದ್
ಆವೇಶದಲಿ +ಮನವುಕ್ಕಿ+ ಹಿಗ್ಗಿದನ್
ಈ +ಶಕುನ +ಸುಮ್ಮಾನವ್+ಇದಕೇನಹುದು+ ಫಲವೆಂದ
ಅಚ್ಚರಿ:
(೧) ಅತೀವ ಸಂತಸವಾಯಿತೆನಲು – ಅಳಿಯದ ಹರುಷರಸದಾವೇಶದಲಿ ಮನವುಕ್ಕಿ ಹಿಗ್ಗಿದನ್