ಪದ್ಯ ೬೦: ಯುಧಿಷ್ಠಿರನೇಕೆ ಧನ್ಯನಾಗಿರುವನು?

ಅರಸ ಕೇಳೈ ಕ್ಷಾತ್ರ ತೇಜವ
ಹೊರೆವುದೇ ಬ್ರಾಹ್ಮಣ್ಯ ಶಕ್ತಿ
ಸ್ಫುರಣ ನೀನೀ ಬ್ರಹ್ಮವರ್ಗದ ಸಾರ ಸೌಖ್ಯದಲಿ
ಮೆರೆದೆಲಾ ವಿಪ್ರಾವಮಾನವೆ
ಸಿರಿಗೆ ನಂಜುಕಣಾ ಮಹೀಸುರ
ವರರುಪಾಸನೆ ನಿನಗೆ ನೀ ಕೃತಕೃತ್ಯನಹೆಯೆಂದ (ಅರಣ್ಯ ಪರ್ವ, ೧೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ರಾಜ ಧರ್ಮಜ ಕೇಳು, ಕ್ಷಾತ್ರ ತೇಜಸ್ಸನ್ನು ಬ್ರಾಹ್ಮಣ್ಯದ ಶಕ್ತಿಯೇ ಕಾಪಾಡುತ್ತದೆ. ಇಷ್ಟು ಜನ ಬ್ರಾಹ್ಮಣರ ಸಮೂಹದಲ್ಲಿ ನೀನು ಶೋಭಿಸುತ್ತಿರುವೆ. ವಿಪ್ರರನ್ನು ಅವಮಾನಿಸುವುದೇ ಐಶ್ವರ್ಯಕ್ಕೆ ವಿಷ ಸಮಾನ. ನೀನು ಬ್ರಾಹ್ಮಣರನ್ನು ಸೇವಿಸುತ್ತಿರುವುದರಿಂದ ಧನ್ಯನಾಗಿರುವೆ ಎಂದು ನಹುಷನು ನುಡಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಕ್ಷಾತ್ರ: ಕ್ಷತ್ರಿಯ; ತೇಜ: ಕಾಮ್ತಿ; ಹೊರೆ:ಕಾಪಾಡು; ಬ್ರಾಹ್ಮಣ್ಯ: ಬ್ರಾಹ್ಮಣನ ಕರ್ಮಗಳು; ಶಕ್ತಿ: ಬಲ; ಸ್ಫುರಣ: ಕಂಪನ, ಹೊಳಪು; ಬ್ರಹ್ಮ: ಬ್ರಾಹ್ಮಣ; ವರ್ಗ: ಗುಂಪು; ಸಾರ: ಶ್ರೇಷ್ಠವಾದ; ಸೌಖ್ಯ: ಸುಖ, ನೆಮ್ಮದಿ; ಮೆರೆ: ಶೋಭಿಸು; ವಿಪ್ರ: ಬ್ರಾಹ್ಮಣ; ಅವಮಾನ: ನಿಂದಿಸು, ಅಗೌರವ; ಸಿರಿ: ಐಶ್ವರ್ಯ; ನಂಜು: ವಿಷ; ಮಹೀಸುರ: ಬ್ರಾಹ್ಮಣ; ವರ: ಶ್ರೇಷ್ಠ; ಉಪಾಸನೆ: ಪೂಜೆ; ಕೃತಕೃತ್ಯ: ಧನ್ಯ, ಕೃತಾರ್ಥ;

ಪದವಿಂಗಡಣೆ:
ಅರಸ +ಕೇಳೈ +ಕ್ಷಾತ್ರ +ತೇಜವ
ಹೊರೆವುದೇ +ಬ್ರಾಹ್ಮಣ್ಯ +ಶಕ್ತಿ
ಸ್ಫುರಣ+ ನೀನ್+ಈ+ ಬ್ರಹ್ಮವರ್ಗದ +ಸಾರ +ಸೌಖ್ಯದಲಿ
ಮೆರೆದೆಲಾ+ ವಿಪ್ರ+ಅವಮಾನವೆ
ಸಿರಿಗೆ+ ನಂಜುಕಣಾ +ಮಹೀಸುರ
ವರರ್+ಉಪಾಸನೆ +ನಿನಗೆ+ ನೀ +ಕೃತಕೃತ್ಯನಹೆಯೆಂದ

ಅಚ್ಚರಿ:
(೧) ಯಾವುದು ವಿಷಕ್ಕೆ ಸಮಾನ – ವಿಪ್ರಾವಮಾನವೆ ಸಿರಿಗೆ ನಂಜುಕಣಾ
(೨) ಮಹೀಸುರ, ಬ್ರಹ್ಮವರ್ಗ, ಬ್ರಾಹ್ಮಣ್ಯ, ವಿಪ್ರ – ಸಮನಾರ್ಥಕ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ