ಆದೊಡೆಲೆ ಧರಣೀಶ ಧರ್ಮವ
ನಾದರಿಸುವೈ ಧರ್ಮವೆಂಬುದು
ವೇದಮಾರ್ಗವಲೈ ಸುಧರ್ಮದ ಸಾರಸಂಗತಿಯ
ಕೈದುವುಳ್ಳೊಡೆ ಕಾದು ನಿನ್ನಯ
ಸೋದರನ ಬಿಡುವೆನು ಮನಃಪರಿ
ಖೇದವನು ಬಿಸುಟೆನ್ನು ಧರ್ಮ ರಹಸ್ಯ ವಿಸ್ತರವ (ಅರಣ್ಯ ಪರ್ವ, ೧೪ ಸಂಧಿ, ೪೬ ಪದ್ಯ)
ತಾತ್ಪರ್ಯ:
ಸರ್ಪವು ಧರ್ಮಜನನ್ನು ಉದ್ದೇಶಿಸಿ, ಎಲೈ ರಾಜನೇ, ನಿನಗೆ ಧರ್ಮವನ್ನು ಕಂಡರೆ ಬಹಲ ಆದರವಲ್ಲವೇ? ಧರ್ಮವು ವೇದವು ತೋರಿದ ಮಾರ್ಗ, ಆದುದರಿಂದ ಧರ್ಮವನ್ನು ಕುರಿತು ಸಂವಾದ ಮಾದು. ನಿನಗೆ ಪರಾಕ್ರಮವಿದ್ದರೆ ಯುದ್ಧ ಮಾಡಿ ನಿನ್ನ ತಮ್ಮನನ್ನು ಬಿಡಿಸಿದ್ಕೋ. ಮನಸ್ಸಿನ ದುಃಖವನ್ನು ಬಿಟ್ಟು ಧರ್ಮ ರಹಸ್ಯವನ್ನು ಹೇಳು ಎಂದು ಹೇಳಿತು.
ಅರ್ಥ:
ಆದೊಡೆ: ಹಾಗಿದ್ದರೆ; ಧರಣೀಶ: ರಾಜ; ಧರ್ಮ: ಧಾರಣೆ ಮಾಡಿದುದು; ಆದರ: ಗೌರವ; ವೇದ: ಶೃತಿ; ಮಾರ್ಗ: ದಾರಿ; ಸಾರ: ಶ್ರೇಷ್ಠವಾದ, ತಿರುಳು; ಸಂಗತಿ: ಸಹವಾಸ; ಕೈದು: ಕತ್ತಿ, ಆಯುಧ; ಕಾದು: ಹೋರಾಡು; ಸೋದರ: ತಮ್ಮ; ಬಿಡು: ತ್ಯಜಿಸು, ತೊರೆ; ಮನ: ಮನಸ್ಸು; ಖೇದ: ದುಃಖ; ಬಿಸುಟು: ಹೊರಹಾಕು; ರಹಸ್ಯ: ಗುಟ್ಟು; ವಿಸ್ತರ: ಹಬ್ಬುಗೆ, ವಿಸ್ತಾರ;
ಪದವಿಂಗಡಣೆ:
ಆದ್+ಒಡೆಲೆ +ಧರಣೀಶ +ಧರ್ಮವನ್
ಆದರಿಸುವೈ +ಧರ್ಮವೆಂಬುದು
ವೇದಮಾರ್ಗವಲೈ+ ಸುಧರ್ಮದ +ಸಾರ+ಸಂಗತಿಯ
ಕೈದುವುಳ್ಳೊಡೆ+ ಕಾದು +ನಿನ್ನಯ
ಸೋದರನ+ ಬಿಡುವೆನು +ಮನಃ+ಪರಿ
ಖೇದವನು +ಬಿಸುಟೆನ್ನು+ ಧರ್ಮ+ ರಹಸ್ಯ+ ವಿಸ್ತರವ
ಅಚ್ಚರಿ:
(೧) ಧ ಕಾರದ ತ್ರಿವಳಿ ಪದ – ಧರಣೀಶ ಧರ್ಮವನಾದರಿಸುವೈ ಧರ್ಮವೆಂಬುದು