ಪದ್ಯ ೪೦: ಭೀಮನು ಅಣ್ಣನಿಗೆ ಹೇಗೆ ಉತ್ತರಿಸಿದನು?

ನೋಡಿದನು ಕಂದೆರೆದು ಕಂಠಕೆ
ಹೂಡಿದುರಗನ ಘೋರ ಬಂಧದ
ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
ಖೇಡನಾದನಜಾತರಿಪು ಮಾ
ತಾಡಿಸಿದನಹಿಪತಿಯ ನೆಲೆ ನಾ
ಡಾಡಿಗಳ ನಾಟಕದ ಫಣಿಯಲ್ಲಾರು ಹೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಣ್ಣು ತೆರೆದು ಭೀಮನು ಅಣ್ಣನನ್ನು ನೋಡಿದನು, ಹಾವು ಅವನ ಕಂಠವನ್ನು ಭದ್ರವಾಗಿ ಬಂಧಿಸಿದ್ದುದರಿಂದ ಅವನು ಮಾತನಾಡಲಾರದೆ ಕೇವಲ ಬೆರಳ ಸನ್ನೆಯನ್ನು ಮಾಡಿದನು. ಅಜಾತಶತ್ರುವಾದ ಧರ್ಮಜನು ಹೆದರಿ ಹಾವನ್ನುದೇಶಿಸಿ, ನೀನು ಸಾಮಾನ್ಯ ಹಾವಲ್ಲ, ನೀನಾರು ಎಂದು ಕೇಳಿದನು.

ಅರ್ಥ:
ನೋಡು: ವೀಕ್ಷಿಸು; ಕಂದೆರೆದು: ಕಣ್ಣು ಬಿಟ್ಟು; ಕಂಠ: ಕೊರಳು
ಹೂಡು: ಅಣಿಗೊಳಿಸು, ಕಟ್ಟು; ಉರಗ: ಹಾವು; ಘೋರ: ಉಗ್ರ, ಭಯಂಕರ; ಬಂಧ: ಕಟ್ಟು, ಬಂಧನ; ಗಾಢ: ಹೆಚ್ಚಳ, ಅತಿಶಯ; ನುಡಿ: ಮಾತಾಡು; ನೆಗ್ಗು: ಕುಗ್ಗು, ಕುಸಿ; ಬೆರಳು: ಅಂಗುಲಿ; ಸನ್ನೆ: ಗುರುತು; ಖೇಡ: ಹೆದರಿದವನು; ಅಜಾತಶತ್ರು: ಧರ್ಮರಾಯ, ಶತ್ರುವೇ ಇಲ್ಲದವ; ಮಾತಾಡಿಸು: ನುಡಿ; ಅಹಿಪತಿ: ಸರ್ಪರಾಜ; ನೆಲೆ: ಸ್ಥಾನ; ನಾಡಾಡಿ: ಸಾಮಾನ್ಯವಾದುದು; ನಾಟಕ: ಲೀಲೆ, ತೋರಿಕೆ; ಫಣಿ: ಹಾವು; ಹೇಳು: ತಿಳಿಸು; ರಿಪು: ಶತ್ರು, ವೈರಿ;

ಪದವಿಂಗಡಣೆ:
ನೋಡಿದನು +ಕಂದೆರೆದು +ಕಂಠಕೆ
ಹೂಡಿದ್+ಉರಗನ +ಘೋರ +ಬಂಧದ
ಗಾಢದಲಿ +ನುಡಿ +ನೆಗ್ಗಿ+ ನುಡಿದನು +ಬೆರಳ +ಸನ್ನೆಯಲಿ
ಖೇಡನಾದನ್+ಅಜಾತರಿಪು+ ಮಾ
ತಾಡಿಸಿದನ್+ಅಹಿಪತಿಯ +ನೆಲೆ +ನಾ
ಡಾಡಿಗಳ +ನಾಟಕದ +ಫಣಿಯಲ್ಲ್+ಆರು +ಹೇಳೆಂದ

ಅಚ್ಚರಿ:
(೧) ಭೀಮನ ಸ್ಥಿತಿ – ಉರಗನ ಘೋರ ಬಂಧದ ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
(೨) ನೆಗ್ಗಿ ನುಡಿದನು; ನೆಲೆ ನಾಡಾಡಿಗಳ ನಾಟಕದ – ನ ಕಾರದ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ