ಪದ್ಯ ೩೯: ಧರ್ಮಜನು ಭೀಮನನ್ನು ಹೇಗೆ ವಿಚಾರಿಸಿದನು?

ಏನು ಕುಂತೀಸುತನಪಾಯವ
ದೇನು ಫಣಿ ಬಂಧದ ವಿಧಾನವಿ
ದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ
ಏನಿದಕೆ ಕರ್ತವ್ಯ ನಮಗೀ
ಹೀನ ದೆಸೆಗೆ ನಿಮಿತ್ತ ದುಷ್ಕೃತ
ವೇನು ಶಿವಶಿವಯೆನುತ ನುಡಿಸಿದನನಿಲ ನಂದನನ (ಅರಣ್ಯ ಪರ್ವ, ೧೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧರ್ಮಜನು ಭೀಮನನ್ನು ನೋಡಿ, ಏನು ಭೀಮ ಇದೇನು ಅಪಾಯಕ್ಕೆ ಸಿಲುಕಿದೆ, ಹಾವಿನ ಹಿಡಿತದಲ್ಲಿ ವಿನೋದದಿಂದ ಸಿಕ್ಕಿದೆಯೋ, ಮನುಷ್ಯರ ಬಲವನ್ನಡಗಿಸುವ ವಿಧಿಯ ಲೀಲೆಯೋ? ನಮಗಿಂತಹ ಹೀನದೆಸೆ ಬರಲು ಕಾರಣವೇನು? ಯಾವ ಪಾಪದಿಂದ ನಿನಗೀ ಗತಿಯು ಬಂದಿತು ಎಂದು ಭೀಮನನ್ನು ಕೇಳಿದನು.

ಅರ್ಥ:
ಸುತ: ಮಗ; ಅಪಾಯ: ತೊಂದರೆ; ಫಣಿ: ಹಾವು; ಬಂಧ: ಕಟ್ಟು, ಪಾಶ; ವಿಧಾನ: ರೀತಿ; ವಿನೋದ: ಸಂತಸ; ತ್ರಾಣಾಪಚಯ: ಶಕ್ತಿಕುಂದುವಿಕೆ; ವಿಧಿ: ನಿಯಮ; ಕರ್ತವ್ಯ: ಕಾಯಕ, ಕೆಲಸ; ಹೀನ: ಅಲ್ಪ, ಕ್ಷುದ್ರ; ದೆಸೆ: ಸ್ಥಿತಿ; ನಿಮಿತ್ತ: ನೆಪ, ಕಾರಣ; ದುಷ್ಕೃತ: ಕೆಟ್ಟ ಕೆಲಸ; ನುಡಿಸು: ಮಾತಾಡಿಸು; ಅನಿಲನಂದನ: ವಾಯುಪುತ್ರ (ಭೀಮ);

ಪದವಿಂಗಡಣೆ:
ಏನು +ಕುಂತೀಸುತನ್+ಅಪಾಯವದ್
ಏನು+ ಫಣಿ +ಬಂಧದ +ವಿಧಾನವ್
ಇದೇನು +ನಿನಗೆ +ವಿನೋದವೋ +ತ್ರಾಣಾಪಚಯ+ ವಿಧಿಯೊ
ಏನಿದಕೆ+ ಕರ್ತವ್ಯ +ನಮಗೀ
ಹೀನ +ದೆಸೆಗೆ +ನಿಮಿತ್ತ +ದುಷ್ಕೃತ
ವೇನು+ ಶಿವಶಿವಯೆನುತ +ನುಡಿಸಿದನ್+ಅನಿಲನಂದನನ

ಅಚ್ಚರಿ:
(೧) ಕುಂತೀಸುತ, ಅನಿಲನಂದನ – ಭೀಮನನ್ನು ಕರೆದ ಪರಿ
(೨) ಭೀಮನ ಬಲದ ಬಗ್ಗೆ ಹೇಳುವ ಪರಿ – ಇದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ

ನಿಮ್ಮ ಟಿಪ್ಪಣಿ ಬರೆಯಿರಿ