ಪದ್ಯ ೩೮: ಧರ್ಮಜನು ಯಾವುದರ ಬಗ್ಗೆ ಚಿಂತಿಸಿದನು?

ಅಕಟ ಹಿಂದನುಭವಿಸಿದೆವು ಕಂ
ಟಕ ಹಲವನೀಪರಿಯ ಬಲು ಕಂ
ಟಕ ಮಹಾಕರ್ದಮದೊಳದ್ದಿತೆ ವಿಧಿ ಮಹಾದೇವ
ವಿಕಟಮದನಾಗಾಯುತ ತ್ರಾ
ಣಕನ ಸಾಹಸವಡಗಿತೇ ವನ
ವಿಕಟ ಭುಜಗಾಟೋಪ ಠೌಳಿಯೊಳೆಂದು ಚಿಂತಿಸಿದ (ಅರಣ್ಯ ಪರ್ವ, ೧೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಯ್ಯೋ, ನಾವು ಹಿಂದೆ ಅನೇಕ ತೊಂದರೆಗಳಿಗೆ ಸಿಕ್ಕಿಹಾಕಿಕೊಂಡಿದ್ದೆವು, ಇಂತಹ ದೊಡ್ಡ ಕಂಟಕದ ಕಪ್ಪು ಕೆಸರಿನಲ್ಲಿ ನಮ್ಮನ್ನು ವಿಧಿಯು ಅದ್ದಿತೇ? ಹಲವು ಆನೆಗಳ ಭುಜಬಲಕ್ಕೆ ಸಮಾನನಾದ ಭೀಮನ ಸತ್ವವು ಅಡಗಿತೇ? ಕಾಡಿನ ಹೆಬ್ಬಾವು ಮೋಸದಿಂದ ಇವನನ್ನು ನಿಗ್ರಹಿಸಿತೇ ಎಂದು ಚಿಂತಿಸಿದನು.

ಅರ್ಥ:
ಅಕಟ: ಅಯ್ಯೋ; ಹಿಂದೆ: ಪುರಾತನ, ಪೂರ್ವ; ಅನುಭವಿಸು: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಕಂಟಕ: ತೊಂದರೆ; ಹಲವು: ಬಹಳ; ಪರಿ: ರೀತಿ; ಬಲು: ಬಹಳ ಮಹಾ: ದೊಡ್ಡ; ಕರ್ದಮ: ಕೆಸರು, ಪಂಕ; ಅದ್ದು: ಮುಳುಗು; ವಿಧಿ: ನಿಯಮ; ವಿಕಟ: ಭೀಕರವಾದ, ಕ್ರೂರವಾದ; ಮದ: ಅಹಂಕಾರ; ನಾಗ: ಆನೆ; ಆಯುತ: ಒಂದುಸಾವಿರ; ತ್ರಾಣ: ಶಕ್ತಿ, ಬಲ; ಸಾಹಸ: ಪರಾಕ್ರಮ; ಅಡಗು: ಮುಚ್ಚು; ವನ: ಕಾಡು; ವಿಕಟ: ಭಾರಿಯಾದ, ಸೊಕ್ಕಿದ; ಭುಜಗ: ಹಾವು; ಆಟೋಪ: ಆವೇಶ, ದರ್ಪ; ಠೌಳಿ: ಮೋಸ, ವಂಚನೆ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಅಕಟ +ಹಿಂದ್+ಅನುಭವಿಸಿದೆವು +ಕಂ
ಟಕ +ಹಲವನ್+ಈ+ಪರಿಯ +ಬಲು +ಕಂ
ಟಕ +ಮಹಾಕರ್ದಮದೊಳ್+ಅದ್ದಿತೆ +ವಿಧಿ +ಮಹಾದೇವ
ವಿಕಟ+ಮದ+ನಾಗ+ಆಯುತ +ತ್ರಾ
ಣಕನ +ಸಾಹಸವ್+ಅಡಗಿತೇ +ವನ
ವಿಕಟ +ಭುಜಗ+ಆಟೋಪ+ ಠೌಳಿಯೊಳ್+ಎಂದು +ಚಿಂತಿಸಿದ

ಅಚ್ಚರಿ:
(೧) ಅಕಟ, ವಿಕಟ; ಕಂಟಕ, ತ್ರಾಣಕ – ಪ್ರಾಸ ಪದಗಳು
(೨) ಭೀಮನ ಬಲ – ವಿಕಟಮದನಾಗಾಯುತ ತ್ರಾಣಕನ ಸಾಹಸವಡಗಿತೇ

ನಿಮ್ಮ ಟಿಪ್ಪಣಿ ಬರೆಯಿರಿ