ಪದ್ಯ ೩೫: ಧರ್ಮಜನು ಯಾವುದರ ಬಗ್ಗೆ ಚಿಂತಿಸಿದ?

ಅರಸ ಕೇಳಿತ್ತಲು ಮಹೀಶನ
ಹೊರೆಯಲಾಯ್ತುತ್ಪಾತಶತ ನಿ
ಷ್ಠುರವಿದೇನೋ ದೈವಕೃತ ಫಲವಾವುದಿದಕೆನುತ
ಕರೆಸಿ ಧೌಮ್ಯಂಗರುಹಲಿದು ನ
ಮ್ಮರುಸುಗಳಿಗಪಘಾತಸೂಚಕ
ವರಿದಿದರ ನಿರ್ವಾಹವೆಂದರೆ ನೃಪತಿ ಚಿಂತಿಸಿದ (ಅರಣ್ಯ ಪರ್ವ, ೧೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಇತ್ತ ಧರ್ಮಜನು ನೂರು ಉತ್ಪಾತಕಗಳನ್ನು ನೋದಿ, ಧೌಮ್ಯರನ್ನು ಬರೆಮಾಡಿ, ಈ ನಿಷ್ಠುರದ ಉತ್ಪಾತಗಳು ಏಕೆ ದೈವವಶದಿಂದ ಕಂಡವು, ಇದಕ್ಕೇನು ಫಲ ಎಂದು ಕೇಳಲು, ಧೌಮ್ಯರು ನಮ್ಮ ರಾಜರಿಗೆ ಅಪಘಾತವನ್ನು ಸೂಚಿಸುತ್ತದೆ ಇದಕ್ಕೆ ಪರಿಹಾರ ಬಲುಕಷ್ಟ ಎಂದು ತಿಳಿಸಲು, ಧರ್ಮಜನು ಚಿಂತೆಗೊಳಗಾದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮಹೀಶ: ರಾಜ; ಹೊರೆ: ಭಾರ; ಉತ್ಪಾತ: ಅಪಶಕುನ; ಶತ: ನೂರು; ನಿಷ್ಠುರ: ಕಠಿಣವಾದುದು; ದೈವ: ಭಗವಂತ; ಕೃತ: ಮಾಡಿದ; ಫಲ: ಪ್ರಯೊಜನ; ಕರೆಸು: ಬರೆಮಾಡು; ಅರುಹು: ಹೇಳು; ಅರುಸು: ರಾಜ; ಅಪಘಾತ: ತೊಂದರೆ; ಸೂಚಕ: ಸುಳಿವು, ಸೂಚನೆ; ಅರಿ: ತಿಳಿ; ನಿರ್ವಾಹ: ನಿವಾರಣೋಪಾಯ; ನೃಪತಿ: ರಾಜ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಅರಸ +ಕೇಳ್+ಇತ್ತಲು+ ಮಹೀಶನ
ಹೊರೆಯಲಾಯ್ತ್+ಉತ್ಪಾತ+ಶತ+ ನಿ
ಷ್ಠುರವ್+ಇದೇನೋ +ದೈವಕೃತ+ ಫಲವಾವುದ್+ಇದಕೆನುತ
ಕರೆಸಿ +ಧೌಮ್ಯಂಗ್+ಅರುಹಲ್+ಇದು +ನಮ್ಮ್
ಅರುಸುಗಳಿಗ್+ಅಪಘಾತ+ಸೂಚಕವ್
ಅರಿದಿದರ +ನಿರ್ವಾಹವೆಂದರೆ+ ನೃಪತಿ +ಚಿಂತಿಸಿದ

ಅಚ್ಚರಿ:
(೧) ಅರಸ, ನೃಪತಿ, ಮಹೀಶ – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ