ಪದ್ಯ ೩೧: ಭೀಮನ ಕೂಗಿಗೆ ಯಾವುದು ಎದ್ದಿತು?

ಮುಡುಹು ಸೋಂಕಲಿಕುಲಿದು ಹೆಮ್ಮರ
ನುಡಿದು ಬಿದ್ದವು ಪಾದಘಾತದೊ
ಳಡಿಗಡಿಗೆ ನೆಗ್ಗಿದುದು ನೆಲನುಬ್ಬರದ ಬೊಬ್ಬೆಯಲಿ
ಜಡಿದುದಬುಜಭವಾಂಡವೆನಲವ
ಗಡೆಯ ಭೀಮನ ಕಳಕಳಕೆ ಕಿವಿ
ಯೊಡೆಯೆ ತೀದುದು ನಿದ್ರೆ ಮುರಿದಿಕ್ಕೆಯ ಮಹೋರಗನ (ಅರಣ್ಯ ಪರ್ವ, ೧೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಭೀಮನ ಭುಜವು ಸೋಕಿದೊಡನೆಯೇ ದೊಡ್ಡ ಮರಗಳು ಸದ್ದು ಮಾಡುತ್ತಾ ಉದುರಿ ಬಿದ್ದವು. ಅವನ ಪಾದದ ತುಳಿತಕ್ಕೆ ಭೂಮಿ ಕುಗ್ಗಿತು. ಅವನ ಗರ್ಜನೆ ಬ್ರಹ್ಮಾಂಡವನ್ನು ತುಂಬಿತು. ಭೀಮನ ಆರ್ಭಟಕ್ಕೆ ಕಿವಿಗಳೊಡೆದವು. ಆ ಸದ್ದಿಗೆ ಬೆಟ್ಟದ ತಪ್ಪಲಿನಲ್ಲಿ ಮಲಗಿದ್ದ ಒಂದು ಹೆಬ್ಬಾವಿನ ನಿದ್ರೆಯು ಕದಡಿತು.

ಅರ್ಥ:
ಮುಡುಹು: ಹೆಗಲು, ಭುಜಾಗ್ರ; ಸೋಂಕು: ತಗಲು, ಮುಟ್ಟು; ಉಲಿ: ಧ್ವನಿ ಮಾಡು; ಹೆಮ್ಮರ: ದೊಡ್ಡ ಮರ; ಉಡಿ: ಮುರಿ, ತುಂಡು ಮಾಡು; ಬಿದ್ದವು: ಬೀಳು; ಪಾದ: ಚರಣ; ಘಾತ: ಹೊಡೆತ, ಪೆಟ್ಟು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ನೆಗ್ಗು: ಕುಗ್ಗು, ಕುಸಿ; ನೆಲ: ಭೂಮಿ; ಅಬ್ಬರ: ಆರ್ಭಟ; ಬೊಬ್ಬೆ: ಕೂಗು; ಜಡಿ: ಬೆದರಿಕೆ, ಹೆದರಿಕೆ; ಅಬುಜ: ಕಮಲ; ಅಬುಜಭವಾಂಡ: ಬ್ರಹ್ಮಾಂಡ; ಅವಗಡ: ಅಸಡ್ಡೆ; ಕಳಕಳ: ಗೊಂದಲ; ಕಿವಿ: ಕರ್ಣ; ಒಡೆ: ಸೀಳು; ತೀದು: ತುಂಬಿ, ಮುಗಿಸಿ; ಬೀಸು; ನಿದ್ರೆ: ಶಯನ; ಮುರಿ: ಸೀಳು; ಇಕ್ಕೆ:ವಾಸಸ್ಥಾನ, ಆಶ್ರಯ; ಮಹೋರಗ: ದೊಡ್ಡದಾದ ಹಾವು, ಹೆಬ್ಬಾವು;

ಪದವಿಂಗಡಣೆ:
ಮುಡುಹು +ಸೋಂಕಲಿಕ್+ಉಲಿದು +ಹೆಮ್ಮರನ್
ಉಡಿದು +ಬಿದ್ದವು +ಪಾದ+ಘಾತದೊಳ್
ಅಡಿಗಡಿಗೆ+ ನೆಗ್ಗಿದುದು+ ನೆಲನ್+ಉಬ್ಬರದ+ ಬೊಬ್ಬೆಯಲಿ
ಜಡಿದುದ್+ಅಬುಜಭವಾಂಡವೆನಲ್+ಅವ
ಗಡೆಯ+ ಭೀಮನ+ ಕಳಕಳಕೆ+ ಕಿವಿ
ಯೊಡೆಯೆ+ ತೀದುದು +ನಿದ್ರೆ +ಮುರಿದ್+ಇಕ್ಕೆಯ +ಮಹಾ+ಉರಗನ

ಅಚ್ಚರಿ:
(೧) ಭೀಮನ ಶೌರ್ಯ – ಮುಡುಹು ಸೋಂಕಲಿಕುಲಿದು ಹೆಮ್ಮರನುಡಿದು ಬಿದ್ದವು ಪಾದಘಾತದೊ
ಳಡಿಗಡಿಗೆ ನೆಗ್ಗಿದುದು ನೆಲನುಬ್ಬರದ ಬೊಬ್ಬೆಯಲಿ
(೨) ೪ ಸಾಲು ಒಂದೇ ಪದವಾಗಿ ರಚಿತವಾಗಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ