ಪದ್ಯ ೨೯: ಭೀಮನು ಹೇಗೆ ಎಲ್ಲಾ ಪ್ರಾಣಿಗಳನ್ನು ಕೊಂದನು?

ಪಡೆ ಬೆದರೆ ಪಡಿತಳಿಸಿ ಪವನಜ
ಹಿಡಿದು ಬೀಸಿದ ನಾನೆಗಳನವ
ಗಡಿಸಿ ಸಿಂಹವ ಸೀಳಿದನು ಹೊಯ್ದೆತ್ತುವೆಕ್ಕಲನ
ಮಡದಲುರೆ ಘಟ್ಟಿಸಿದ ಮುಷ್ಟಿಯೊ
ಳಡಸಿ ತಿವಿದನು ಹುಲಿಯ ಕರಡಿಯ
ಕೊಡಹಿದನು ಕೊಂದನು ವನಾಂತದೊಳಖಿಳಮೃಗಕುಲವ (ಅರಣ್ಯ ಪರ್ವ, ೧೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬೇಟೆಗಾರರ ಹಿಂಡು ಮೃಗಗಳ ಪ್ರತಿರೋಧಕ್ಕೆ ಹೆದರಿದುದನ್ನು ಕಂಡ ಭೀಮನು ಆನೆಗಳನ್ನು ಹಿಡಿದು ಬೀಸಿ ಎಸೆದನು. ಸಿಂಹಗಳನ್ನು ಸೀಳಿದನು, ಹಂದಿಗಳ ಪಾದಗಳನ್ನು ಹಿಡಿದು ಬಡಿದನು, ಮುಷ್ಟಿಯಿಂದ ಹುಲಿಗಳನ್ನು ತಿವಿದನು. ಕರಡಿಗಳನ್ನು ಕೊಡವಿದನು. ಎಲ್ಲಾ ಮೃಗಗಳನ್ನೂ ಕೊಂದನು.

ಅರ್ಥ:
ಪಡೆ: ಸೈನ್ಯ, ಗುಂಪು; ಬೆದರು: ಅಂಜಿಕೆ, ಹೆದರು; ಪಡಿತಳ: ಆಕ್ರಮಣ; ಪವನಜ: ವಾಯುಪುತ್ರ (ಭೀಮ); ಹಿಡಿ: ಬಂಧಿಸು; ಬೀಸು: ತೂಗುವಿಕೆ; ಆನೆ: ಕರಿ, ಗಜ; ಅವಗಡಿಸು: ಕಡೆಗಣಿಸು; ಸಿಂಹ: ಕೇಸರಿ; ಸೀಳು: ಚೂರು; ಹೊಯ್ದು: ಹೊಡೆ; ಎತ್ತು: ಮೇಲಕ್ಕೆ ತರು; ಇಕ್ಕೆಲ: ಎರಡೂ ಬದಿ; ಮಡ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಉರೆ: ಹೆಚ್ಚು, ಅಧಿಕ; ಘಟ್ಟಿಸು: ಹೊಡೆ, ಅಪ್ಪಳಿಸು; ಮುಷ್ಟಿ: ಮುಚ್ಚಿದ ಅಂಗೈ; ಅಡಸು: ಬಿಗಿಯಾಗಿ ಒತ್ತು; ತಿವಿ: ಚುಚ್ಚು; ಹುಲಿ: ವ್ಯಾಘ್ರ; ಕೊಡಹು: ಒದರು, ಜಾಡಿಸು; ಕೊಂದನು: ಕೊಲ್ಲು, ಸಾಯಿಸು; ವನ: ಕಾಡು; ಅಖಿಳ: ಎಲ್ಲಾ; ಮೃಗ: ಪ್ರಾಣಿ; ಕುಲ: ವಂಶ;

ಪದವಿಂಗಡಣೆ:
ಪಡೆ +ಬೆದರೆ +ಪಡಿತಳಿಸಿ+ ಪವನಜ
ಹಿಡಿದು +ಬೀಸಿದನ್ +ಆನೆಗಳನ್+ಅವ
ಗಡಿಸಿ+ ಸಿಂಹವ +ಸೀಳಿದನು +ಹೊಯ್ದ್+ಎತ್ತುವ್+ಇಕ್ಕಲನ
ಮಡದಲುರೆ+ ಘಟ್ಟಿಸಿದ+ ಮುಷ್ಟಿಯೊಳ್
ಅಡಸಿ +ತಿವಿದನು +ಹುಲಿಯ +ಕರಡಿಯ
ಕೊಡಹಿದನು+ ಕೊಂದನು +ವನಾಂತದೊಳ್+ಅಖಿಳ+ಮೃಗ+ಕುಲವ

ಅಚ್ಚರಿ:
(೧) ಭೀಮನ ಸಾಹಸ – ಪವನಜ ಹಿಡಿದು ಬೀಸಿದನಾನೆಗಳನ್, ಅವಗಡಿಸಿ ಸಿಂಹವ ಸೀಳಿದನು ಹೊಯ್ದೆತ್ತುವೆಕ್ಕಲನ, ಮಡದಲುರೆ ಘಟ್ಟಿಸಿದ ಮುಷ್ಟಿಯೊಳಡಸಿ ತಿವಿದನು ಹುಲಿಯ, ಕರಡಿಯ
ಕೊಡಹಿದನು

ನಿಮ್ಮ ಟಿಪ್ಪಣಿ ಬರೆಯಿರಿ