ಗಾಯವಡೆದೆಕ್ಕಲನ ರಭಸದ
ಜಾಯಿಲನ ಗಳಗರ್ಜನೆಯ ಪೂ
ರಾಯದೇರಿನ ಕರಡಿ ಕಾಡಾನೆಗಳ ಕಳಕಳದ
ನೋಯಲೊರಲುವ ಶರಭ ಸಿಂಹ ಲು
ಲಾಯ ವೃಕ ಶಾರ್ದೂಲ ಶಶ ಗೋ
ಮಾಯು ಮೊದಲಾದಖಿಳ ಮೃಗರವ ತುಂಬಿತಂಬರವ (ಅರಣ್ಯ ಪರ್ವ, ೧೪ ಸಂಧಿ, ೨೭ ಪದ್ಯ)
ತಾತ್ಪರ್ಯ:
ಗಾಯಗೊಂಡ ಹಂದಿ, ಬೇಟೆನಾಯಿ, ಆಯುಧಗಳಿಂದ ನೊಂದ ಕರಡಿ, ಕಾಡಾನೆಗಳು, ನೋವಿನಿಂದ ಒರಲುವ ಶರಭ, ಸಿಂಹ, ಕಾಡುಕೋಣ, ತೋಳ, ಹುಲಿ, ಮೊಲ ನರಿಗಳ ಕೂಗುಗಳು ಆಕಾಶವನ್ನೆಲ್ಲಾ ವ್ಯಾಪಿಸಿದವು.
ಅರ್ಥ:
ಗಾಯ: ಪೆಟ್ಟು; ಇಕ್ಕೆಲ: ಎರಡೂ ಕಡೆ; ರಭಸ: ವೇಗ; ಜಾಯಿಲ: ನಾಯಿ; ಗಳ: ಕಂಠ; ಗರ್ಜನೆ: ಜೋರಾದ ಕೂಗು; ಪೂರಾಯ: ಪರಿಪೂರ್ಣ; ಪೂರಾಯದೇರು: ವಿಶೇಷವಾದ ಗಾಯ; ಆನೆ: ಗಜ; ಕಳಕಳ: ಗೊಂದಲ; ನೋವು: ಬೇನೆ; ಒರಲು: ಅರಚು; ಶರಭ: ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ ; ಸಿಂಹ: ಕೇಸರಿ; ಲುಲಾಯ: ಕೋಣ; ವೃಕ: ತೋಳ; ಶಾರ್ದೂಲ: ಹುಲಿ; ಶಶ: ಮೊಲ; ಗೋಮಾಯ: ಜಂಬುಕ, ನರಿ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಮೃಗ: ಪ್ರಾಣಿ; ರವ: ಶಬ್ದ; ತುಂಬು: ಆವರಿಸು; ಅಂಬರ: ಆಗಸ;
ಪದವಿಂಗಡಣೆ:
ಗಾಯವಡೆದ್+ಇಕ್ಕಲನ +ರಭಸದ
ಜಾಯಿಲನ +ಗಳ+ಗರ್ಜನೆಯ +ಪೂ
ರಾಯದೇರಿನ +ಕರಡಿ+ ಕಾಡಾನೆಗಳ+ ಕಳಕಳದ
ನೋಯಲ್+ಒರಲುವ +ಶರಭ +ಸಿಂಹ +ಲು
ಲಾಯ +ವೃಕ +ಶಾರ್ದೂಲ +ಶಶ+ ಗೋ
ಮಾಯು +ಮೊದಲಾದ್+ಅಖಿಳ +ಮೃಗರವ+ ತುಂಬಿತ್+ಅಂಬರವ
ಅಚ್ಚರಿ:
(೧) ಪ್ರಾಣಿಗಳ ಹೆಸರನ್ನು ತಿಳಿಸುವ ಪದ್ಯ – ಜಾಯಿಲ, ಗೋಮಾಯ, ಲುಲಾಯ, ವೃಕ, ಶಾರ್ದೂಲ, ಶಶ, ಸಿಂಹ, ಕರಡಿ, ಕಾಡಾನೆ, ಶರಭ