ಪದ್ಯ ೧೫: ಬೇಡನು ಭೀಮನಿಗೆ ಯಾವುದರ ಬಗ್ಗೆ ವಿವರವನ್ನು ನೀಡಿದನು?

ಬಂದನೊಬ್ಬನು ಪವನಸುತನ ಪು
ಳಿಂದನಟವೀತಟದ ಖಗಮೃಗ
ವೃಂದದಿಕ್ಕೆಯ ಹಕ್ಕೆಯಾಡುಂಬೊಲದ ಸೋಹೆಗಳ
ನಿಂದನೆಲೆ ನೀರ್ದಾಣ ಹೆಜ್ಜೆಗ
ಳಿಂದ ಭೇದಿಸಿ ಜೀಯ ಚಿತ್ತವಿ
ಸೆಂದು ಬಿನ್ನಹ ಮಾಡಿದನು ಕಲಿ ಭೀಮಸೇನಂಗೆ (ಅರಣ್ಯ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಒಬ್ಬ ಬೇಡನು ಬಂದು ಅಡವಿಯಲ್ಲಿ ಪಕ್ಷಿಗಳ ಗೂಡುಗಳು, ಮೃಗಗಳು ಇರುವ ಸ್ಥಳಗಳು ಅವು ನಿಲ್ಲುವ ಜಾಗಗಳು, ತಿರುಗಾಡುವ ಸುಳಿವು, ಸದ್ಯದಲ್ಲಿ ನಿಂತಿರುವ ಜಾಗ, ಅವು ನೀರು ಕುಡಿಯುವ ಜಾಗಗಳು ಇವುಗಳನ್ನೆಲ್ಲಾ ಅವುಗಳ ಹೆಜ್ಜೆಗಳ ಗುರುತಿನಿಂದ ಕಂಡು ಹಿಡಿದು ಭೀಮನಿಗೆ ಜೀಯಾ ಕೇಳು ಎಂದು ಎಲ್ಲವನ್ನು ತಿಳಿಸಿದನು.

ಅರ್ಥ:
ಬಂದನು: ಆಗಮಿಸು; ಪವನಸುತ: ವಾಯುಪುತ್ರ (ಭೀಮ); ಪುಳಿಂದ: ಬೇಡ; ಅಟವಿ: ಕಾಡು; ತಟ: ಬೆಟ್ಟದ ತಪ್ಪಲು, ದಡ; ಖಗ: ಪಕ್ಷಿ; ಮೃಗ: ಪ್ರಾಣಿ; ವೃಂದ: ಗುಂಪು; ಇಕ್ಕೆ: ಗುಡಿಸಲು; ಹಕ್ಕೆ: ಹಕ್ಕಿಯ ಗೂಡು; ಸೋಹು: ಅಡಗಿರುವ ಪ್ರಾಣಿಗಳನ್ನು ಪೊದೆ ಗಳಿಂದ ಎಬ್ಬಿಸಿ ಆಡುವ ಒಂದು ಬಗೆಯ ಬೇಟೆ; ನಿಲ್ಲು: ತಡೆ; ನೀರ್ದಾಣ: ನೀರಿನ ಸ್ಥಾನ; ಹೆಜ್ಜೆ: ಪದ; ಭೇದಿಸು: ಬಗೆ, ವಿಧ, ಪ್ರಕಾರ; ಜೀಯ: ಒಡೆಯ; ಚಿತ್ತವಿಸು: ಗಮನವಿಟ್ಟು ಕೇಳು; ಬಿನ್ನಹ: ಮನವಿ; ಕಲಿ: ಶೂರ;

ಪದವಿಂಗಡಣೆ:
ಬಂದನ್+ಒಬ್ಬನು +ಪವನಸುತನ +ಪು
ಳಿಂದನ್+ಅಟವೀ+ತಟದ +ಖಗ+ಮೃಗ
ವೃಂದದ್+ಇಕ್ಕೆಯ +ಹಕ್ಕೆ+ಆಡುಂಬೊಲದ+ ಸೋಹೆಗಳ
ನಿಂದನೆಲೆ +ನೀರ್ದಾಣ+ ಹೆಜ್ಜೆಗ
ಳಿಂದ +ಭೇದಿಸಿ +ಜೀಯ +ಚಿತ್ತವಿ
ಸೆಂದು +ಬಿನ್ನಹ +ಮಾಡಿದನು +ಕಲಿ +ಭೀಮಸೇನಂಗೆ

ನಿಮ್ಮ ಟಿಪ್ಪಣಿ ಬರೆಯಿರಿ