ಪದ್ಯ ೧೩: ಪಾಂಡವರು ಯಾವ ಅರಣ್ಯಕ್ಕೆ ಪ್ರಯಾಣ ಬಳಸಿದರು?

ಇವರು ಕಾಮ್ಯಕ ಕಾನನವನನು
ಭವಿಸಿ ಬಳಿಕಲ್ಲಿಂದ ಹೊರವಂ
ಟವಗಡೆಯ ಪರ್ವತಕೆ ಬಂದರು ಯಾಮುನಾಹ್ವಯದ
ದಿವಿಜರಿಪು ಹೈಡಿಂಬನಾ ತುದಿ
ಗಾರನೇರಿಸಿದನು ತದಗ್ರದೊ
ಳವನಿಪತಿ ಕೆಲದಿವಸವಿದ್ದಲ್ಲಿಂದ ಹೊರವಂಟ (ಅರಣ್ಯ ಪರ್ವ, ೧೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಾಂಡವರು ಕಾಮ್ಯಕವನದಲ್ಲಿ ಕೆಲದಿನಗಳ ಕಾಲ ವಾಸವಾಗಿದ್ದು ಅಲ್ಲಿಂದ ಹೊರಟು ಅಪಾಯವಾಗಿದ್ದ ಯಾಮುನ ಪರ್ವತಕ್ಕೆ ಬಂದರು. ದಾನವನಾದ ಘಟೋತ್ಕಚನು ಅವರನ್ನು ಪರ್ವತದ ಮೇಲಕ್ಕೆ ಹತ್ತಿಸಿ ಅಲ್ಲಿ ಕೆಲದಿನಗಳಿದ್ದು ಅಲ್ಲಿಂದ ಮುಂದೆ ಪ್ರಯಾಣ ಮಾಡಿದರು.

ಅರ್ಥ:
ಕಾನನ: ಅರಣ್ಯ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಬಳಿಕ: ನಂತರ; ಹೊರವಂಟ: ತೆರಳು; ಪರ್ವತ: ಬೆಟ್ಟ; ಬಂದರು: ಆಗಮಿಸು; ದಿವಿಜ: ದೇವತೆ; ರಿಪು: ವೈರಿ; ತುದಿ: ಅಗ್ರ; ಏರಿಸು: ಮೇಲಕ್ಕೆ ಹತ್ತಿಸು; ಅಗ್ರ: ತುದಿ, ಮೇಲುಭಾಗ; ಅವನಿಪತಿ: ರಾಜ; ಕೆಲ: ಸ್ವಲ್ಪ; ದಿವಸ: ದಿನ; ಅವಗಡೆ: ಅಪಾಯ; ಆಹ್ವಯ: ಕರೆಯುವಿಕೆ;

ಪದವಿಂಗಡಣೆ:
ಇವರು +ಕಾಮ್ಯಕ +ಕಾನನವನ್+ಅನು
ಭವಿಸಿ+ ಬಳಿಕ್+ಅಲ್ಲಿಂದ +ಹೊರವಂಟ್
ಅವಗಡೆಯ+ ಪರ್ವತಕೆ+ ಬಂದರು +ಯಾಮುನ+ಆಹ್ವಯದ
ದಿವಿಜರಿಪು +ಹೈಡಿಂಬನಾ +ತುದಿಗ್
ಆರನೇರಿಸಿದನು +ತದ್+ಅಗ್ರದೊಳ್
ಅವನಿಪತಿ +ಕೆಲದಿವಸವಿದ್+ಅಲ್ಲಿಂದ +ಹೊರವಂಟ

ಅಚ್ಚರಿ:
(೧) ಘಟೋತ್ಕಚನನ್ನು ಕರೆಯುವ ಪರಿ – ದಿವಿಜರಿಪು ಹೈಡಿಂಬನ

ನಿಮ್ಮ ಟಿಪ್ಪಣಿ ಬರೆಯಿರಿ