ಪದ್ಯ ೭: ಐಂದ್ರಾಸ್ತ್ರದ ಪ್ರಭಾವ ಹೇಗಿತ್ತು?

ಮೊದಲೊಳೈಂದ್ರ ಮಹಾಸ್ತ್ರವನು ಹೂ
ಡಿದನು ಹೊಗೆದುದು ಭುವನ ದಿಕ್ಕುಗ
ಳೊದರಿದವು ಪಂಟಿಸಿತು ರವಿರಥ ಗಗನಮಾರ್ಗದಲಿ
ಉದರ್ಧಿಯುದಧಿಯ ತೆರೆಯ ಗಂಟಿ
ಕ್ಕಿದವು ಹರಹರ ಹೇಳಬಾರದ
ಹೊದರು ಹೊಡಿಸಿತು ಕೀಳುಮೇಲಣ ಜಗದ ಹಂತಿಗಳ (ಅರಣ್ಯ ಪರ್ವ, ೧೪ ಸಂಧಿ, ೭ ಪದ್ಯ)

ತಾತ್ಪರ್ಯ:
ಅರ್ಜುನನು ಐಂದ್ರಾಸ್ತ್ರವನ್ನು ಮೊದಲು ಹೂಡಿದನು. ಭೂಮಿಯ ತುಂಬಾ ಹೊಗೆ ತುಂಬಿತು. ದಿಕ್ಕುಗಳೂ ಕೂಗಿಕೊಂಡವು. ಆಕಾಶದಲ್ಲಿ ಸೂರ್ಯನ ರಥವು ಮುಗ್ಗುರಿಸಿತು. ಸಮುದ್ರಗಳ ಅಲಿಗಳು ಗಂಟು ಹಾಕಿಕೊಂಡವು. ಮೇಲು ಮತ್ತು ಕೀಳ ಲೋಕಗಳಲ್ಲಿ ಹೇಳಲಾಗದಮ್ತಹ ಮಬ್ಬು ಮುಸುಕಿತು.

ಅರ್ಥ:
ಮೊದಲು: ಮುಂಚೆ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಹೂಡು: ಅಣಿಗೊಳಿಸು; ಹೊಗೆ: ಧೂಮ; ಭುವನ: ಭೂಮಿ; ದಿಕ್ಕು: ದಿಶೆ; ಒದರು: ಕೊಡಹು, ಜಾಡಿಸು; ಪಂಟಿಸು: ಆಕ್ರಮಿಸು, ಸುತ್ತುವರಿ; ರವಿ: ಸೂರ್ಯ; ರಥ: ಬಂಡಿ; ಗಗನ: ಆಗಸ; ಮಾರ್ಗ: ಹಾದಿ; ಉದಧಿ: ಸಮುದ್ರ; ತೆರೆ: ಅಲೆ; ಗಂಟು: ಸೇರಿಸಿ ಕಟ್ಟಿದುದು, ಕಟ್ಟು; ಹರ: ಶಿವ; ಹೊದರು: ತೊಡಕು, ತೊಂದರೆ; ಹೊದಿಸು: ಮುಚ್ಚು; ಕೀಳುಮೇಲಣ: ಕನಿಷ್ಠ ಶ್ರೇಷ್ಠ; ಜಗ: ಪ್ರಪಂಚ; ಹಂತಿ: ಗುಂಪು;

ಪದವಿಂಗಡಣೆ:
ಮೊದಲೊಳ್+ಐಂದ್ರ +ಮಹಾಸ್ತ್ರವನು +ಹೂ
ಡಿದನು +ಹೊಗೆದುದು +ಭುವನ +ದಿಕ್ಕುಗಳ್
ಒದರಿದವು +ಪಂಟಿಸಿತು +ರವಿ+ರಥ +ಗಗನ+ಮಾರ್ಗದಲಿ
ಉದಧಿ+ಉದಧಿಯ +ತೆರೆಯ +ಗಂಟಿ
ಕ್ಕಿದವು +ಹರಹರ +ಹೇಳಬಾರದ
ಹೊದರು +ಹೊಡಿಸಿತು +ಕೀಳುಮೇಲಣ +ಜಗದ +ಹಂತಿಗಳ

ಅಚ್ಚರಿ:
(೧) ಜೋಡಿ ಪದಗಳು – ಉದಧಿಯುದಧಿ, ಹರಹರ
(೨) ಹ ಕಾರದ ಸಾಲು ಪದಗಳು – ಹರಹರ ಹೇಳಬಾರದ ಹೊದರು ಹೊಡಿಸಿತು

ನಿಮ್ಮ ಟಿಪ್ಪಣಿ ಬರೆಯಿರಿ