ಅರಸ ಕೇಳೈ ನಾರದನ ನುಡಿ
ಗುರುತರವಲೇ ಪಾರ್ಥನಾ ಬಿಲು
ದಿರುವ ಮಗುಳಿಳುಹಿದನು ಮುನಿಪನ ಮಾತ ಮನ್ನಿಸಿದ
ಹರಿದುದಮರರ ಮೇಲೆ ನೋಡುವ
ನೆರವಿ ದಿಗುಪಾಲಕರು ನಿಜಮಂ
ದಿರಕೆ ಸರಿದರು ದೇವಮುನಿ ಹಾಯಿದನು ಗಗನದಲಿ (ಅರಣ್ಯ ಪರ್ವ, ೧೪ ಸಂಧಿ, ೧೨ ಪದ್ಯ)
ತಾತ್ಪರ್ಯ:
ನಾರದನ ಘನವಾದ ನುಡಿಯನ್ನು ಕೇಳಿ, ಅರ್ಜುನನು ಗಾಂಡೀವದ ಹೆದೆಯನ್ನು ಕಳಚಿದನು. ಮೇಲೆ ನೋಡಲು ನೆರೆದಿದ್ದ ದೇವತೆಗಳೂ, ದಿಕ್ಪಾಲಕರೂ ಅವರವರ ಆಲಯಗಳಿಗೆ ತೆರಳಿದರು. ನಾರದರು ಆಗಸ ಮಾರ್ಗದಲ್ಲಿ ಮತ್ತೆ ಸ್ವರ್ಗಕ್ಕೆ ಹೋದರು.
ಅರ್ಥ:
ಅರಸ: ರಾಜ; ಕೇಳು: ಆಲಿಸು; ನುಡಿ: ಮಾತು; ಗುರುತರ: ಹಿರಿದಾದುದು; ಬಿಲು: ಬಿಲ್ಲು; ಉದಿರು: ಕೆಳಗೆ ಬೀಳು; ಮಗುಳು: ಹಿಂತಿರುಗು; ಇಳುಹು: ಕೆಳಕ್ಕೆ ಬೀಳು; ಮುನಿ: ಋಷಿ; ಮಾತು: ನುಡಿ; ಮನ್ನಿಸು: ಗೌರವಿಸು; ಹರಿ: ಚಲಿಸು; ಅಮರ: ದೇವತೆ; ಮೇಲೆ: ಮುಂದೆ, ಎತ್ತರ; ನೋಡು: ವೀಕ್ಷಿಸು; ನೆರವು: ಸಹಾಯ; ದಿಗುಪಾಲ: ದಿಕ್ಪಾಲಕ; ನಿಜ: ತನ್ನ, ದಿಟ; ಮಂದಿರ: ಆಲಯ; ಸರಿ: ಹೋಗು, ಗಮಿಸು; ದೇವಮುನಿ: ನಾರದ; ಹಾಯಿದ:
ಪದವಿಂಗಡಣೆ:
ಅರಸ +ಕೇಳೈ +ನಾರದನ +ನುಡಿ
ಗುರುತರವಲೇ +ಪಾರ್ಥನಾ +ಬಿಲ್
ಉದಿರುವ +ಮಗುಳ್+ಇಳುಹಿದನು +ಮುನಿಪನ +ಮಾತ +ಮನ್ನಿಸಿದ
ಹರಿದುದ್+ ಅಮರರ +ಮೇಲೆ +ನೋಡುವ
ನೆರವಿ +ದಿಗುಪಾಲಕರು +ನಿಜ+ಮಂ
ದಿರಕೆ +ಸರಿದರು+ ದೇವಮುನಿ +ಹಾಯಿದನು +ಗಗನದಲಿ
ಅಚ್ಚರಿ:
(೧) ಮ ಕಾರದ ಸಾಲು ಪದ – ಮಗುಳಿಳುಹಿದನು ಮುನಿಪನ ಮಾತ ಮನ್ನಿಸಿದ
(೨) ಸ್ವರ್ಗಕ್ಕೆ ಹೋದನು ಎಂದು ಹೇಳುವ ಪರಿ – ದೇವಮುನಿ ಹಾಯಿದನು ಗಗನದಲಿ