ಪದ್ಯ ೧೨: ನಾರದರ ಮಾತನ್ನು ಅರ್ಜುನನು ಹೇಗೆ ಗೌರವಿಸಿದನು?

ಅರಸ ಕೇಳೈ ನಾರದನ ನುಡಿ
ಗುರುತರವಲೇ ಪಾರ್ಥನಾ ಬಿಲು
ದಿರುವ ಮಗುಳಿಳುಹಿದನು ಮುನಿಪನ ಮಾತ ಮನ್ನಿಸಿದ
ಹರಿದುದಮರರ ಮೇಲೆ ನೋಡುವ
ನೆರವಿ ದಿಗುಪಾಲಕರು ನಿಜಮಂ
ದಿರಕೆ ಸರಿದರು ದೇವಮುನಿ ಹಾಯಿದನು ಗಗನದಲಿ (ಅರಣ್ಯ ಪರ್ವ, ೧೪ ಸಂಧಿ, ೧೨ ಪದ್ಯ)

ತಾತ್ಪರ್ಯ:
ನಾರದನ ಘನವಾದ ನುಡಿಯನ್ನು ಕೇಳಿ, ಅರ್ಜುನನು ಗಾಂಡೀವದ ಹೆದೆಯನ್ನು ಕಳಚಿದನು. ಮೇಲೆ ನೋಡಲು ನೆರೆದಿದ್ದ ದೇವತೆಗಳೂ, ದಿಕ್ಪಾಲಕರೂ ಅವರವರ ಆಲಯಗಳಿಗೆ ತೆರಳಿದರು. ನಾರದರು ಆಗಸ ಮಾರ್ಗದಲ್ಲಿ ಮತ್ತೆ ಸ್ವರ್ಗಕ್ಕೆ ಹೋದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ನುಡಿ: ಮಾತು; ಗುರುತರ: ಹಿರಿದಾದುದು; ಬಿಲು: ಬಿಲ್ಲು; ಉದಿರು: ಕೆಳಗೆ ಬೀಳು; ಮಗುಳು: ಹಿಂತಿರುಗು; ಇಳುಹು: ಕೆಳಕ್ಕೆ ಬೀಳು; ಮುನಿ: ಋಷಿ; ಮಾತು: ನುಡಿ; ಮನ್ನಿಸು: ಗೌರವಿಸು; ಹರಿ: ಚಲಿಸು; ಅಮರ: ದೇವತೆ; ಮೇಲೆ: ಮುಂದೆ, ಎತ್ತರ; ನೋಡು: ವೀಕ್ಷಿಸು; ನೆರವು: ಸಹಾಯ; ದಿಗುಪಾಲ: ದಿಕ್ಪಾಲಕ; ನಿಜ: ತನ್ನ, ದಿಟ; ಮಂದಿರ: ಆಲಯ; ಸರಿ: ಹೋಗು, ಗಮಿಸು; ದೇವಮುನಿ: ನಾರದ; ಹಾಯಿದ:

ಪದವಿಂಗಡಣೆ:
ಅರಸ +ಕೇಳೈ +ನಾರದನ +ನುಡಿ
ಗುರುತರವಲೇ +ಪಾರ್ಥನಾ +ಬಿಲ್
ಉದಿರುವ +ಮಗುಳ್+ಇಳುಹಿದನು +ಮುನಿಪನ +ಮಾತ +ಮನ್ನಿಸಿದ
ಹರಿದುದ್+ ಅಮರರ +ಮೇಲೆ +ನೋಡುವ
ನೆರವಿ +ದಿಗುಪಾಲಕರು +ನಿಜ+ಮಂ
ದಿರಕೆ +ಸರಿದರು+ ದೇವಮುನಿ +ಹಾಯಿದನು +ಗಗನದಲಿ

ಅಚ್ಚರಿ:
(೧) ಮ ಕಾರದ ಸಾಲು ಪದ – ಮಗುಳಿಳುಹಿದನು ಮುನಿಪನ ಮಾತ ಮನ್ನಿಸಿದ
(೨) ಸ್ವರ್ಗಕ್ಕೆ ಹೋದನು ಎಂದು ಹೇಳುವ ಪರಿ – ದೇವಮುನಿ ಹಾಯಿದನು ಗಗನದಲಿ

ನಿಮ್ಮ ಟಿಪ್ಪಣಿ ಬರೆಯಿರಿ