ಪದ್ಯ ೫: ಗಾಂಡೀವದ ಶಬ್ದಕ್ಕೆ ಯಾರು ಬಂದರು?

ಏನಿದದ್ಭುತ ರವವೆನುತ ವೈ
ಮಾನಿಕರು ನಡನಡುಗಿದರು ಗ
ರ್ವಾನುನಯಗತವಾಯ್ತಲೇ ಸುರಪುರದ ಗರುವರಿಗೆ
ಆ ನಿರುತಿ ಯಮ ವರುಣ ವಾಯು ಕೃ
ಶಾನು ಧನದ ಮಹೇಶರೈತರ
ಲಾನೆಯಲಿ ಹೊರವಂಟನಂಬರಗತಿಯಲಮರೇಂದ್ರ (ಅರಣ್ಯ ಪರ್ವ, ೧೪ ಸಂಧಿ, ೫ ಪದ್ಯ)

ತಾತ್ಪರ್ಯ:
ಗಾಂಡೀವದ ಹೆದೆಯ ಮೊಳಗಿನಿಂದ ದೇವತೆಗಳ ಹೆಮ್ಮೆಯು ಉಡುಗಿ, ಅವರು ನಡುಗಿದರು. ನಿರುಋತಿ, ವರುಣ, ವಾಯು, ಅಗ್ನಿ, ಕುಬೇರರು ಇದೇನೆಂದು ನೋಡಲು ಹೊರಟರು. ಆಗ ಇಂದ್ರನೂ ಐರಾವತದ ಮೇಲೆ ಬಂದನು.

ಅರ್ಥ:
ಅದ್ಭುತ: ಆಶ್ಚರ್ಯ; ರವ: ಶಬ್ದ; ವೈಮಾನಿಕ: ದೇವತೆ; ನಡುಗು: ನಡುಕ, ಕಂಪನ; ಗರುವ: ಹಿರಿಯ, ಶ್ರೇಷ್ಠ; ನಿರುತಿ: ನೈಋತ್ಯದಿಕ್ಕಿನ ಒಡೆಯ; ಕೃಶಾನು: ಅಗ್ನಿ, ಬೆಂಕಿ; ಧನ: ಕುಬೇರ; ಮಹೇಶ: ಈಶ್ವರ; ಐತರು: ಬರುವಿಕೆ; ಹೊರವಂಟ: ತೆರಳು; ಅಂಬರ: ಆಗಸ; ಗತಿ: ವೇಗ; ಅಮರೇಂದ್ರ: ಇಂದ್ರ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು;

ಪದವಿಂಗಡಣೆ:
ಏನಿದ್+ಅದ್ಭುತ +ರವವ್+ಎನುತ +ವೈ
ಮಾನಿಕರು+ ನಡನಡುಗಿದರು +ಗ
ರ್ವ+ಅನುನಯ+ಗತವಾಯ್ತಲೇ +ಸುರಪುರದ+ ಗರುವರಿಗೆ
ಆ +ನಿರುತಿ +ಯಮ +ವರುಣ +ವಾಯು +ಕೃ
ಶಾನು +ಧನದ +ಮಹೇಶರ್+ಐತರಲ್
ಆನೆಯಲಿ +ಹೊರವಂಟನ್+ಅಂಬರ+ಗತಿಯಲ್+ಅಮರೇಂದ್ರ

ಅಚ್ಚರಿ:
(೧) ದಿಕ್ಕುಗಳನ್ನು ಹೇಳುವ ಪರಿ – ನಿರುತಿ, ಯಮ, ವರುಣ, ವಾಯು, ಕೃಶಾನು, ಧನ

ನಿಮ್ಮ ಟಿಪ್ಪಣಿ ಬರೆಯಿರಿ