ಪದ್ಯ ೨: ಮುಂಜಾನೆಯ ಸಮಯದಲ್ಲಿ ಯಾರು ಯಾವ ಕಾರ್ಯದಲ್ಲಿ ತೊಡಗಿದರು?

ಅರಸನುಪ್ಪವಡಿಸಿದನೆದ್ದನು
ವರವೃಕೋದರನರ್ಜುನನ ದೃಗು
ಸರಸಿರುಹವರಳಿದವು ಮಾದ್ರೀಸುತರು ಮೈಮುರಿದು
ಹರಿಯ ನೆನೆದರು ನಿದ್ರೆ ತಿಳಿದುದು
ಪರಿಜನಕೆ ಮುನಿನಿಕರವಿದ್ದುದು
ತರಣಿ ಸಂಧ್ಯಾಸಮಯ ಸತ್ಕೃತಿ ಜಪಸಮಾಧಿಯಲಿ (ಅರಣ್ಯ ಪರ್ವ, ೧೪ ಸಂಧಿ, ೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಸಹದೇವರು ನಿದ್ದೆಯಿಂದ ಎದ್ದು ಹರಿನಾಮ ಸ್ತುತಿ ಮಾದಿದರು. ಬಂಧುಜನರೂ ಸಹ ಎದ್ದರು. ಮುನಿಗಳೂ ಪ್ರಾತಃ ಸಂಧ್ಯಾವಂದನೆ ಮಾಡಿ ಜಪಾದಿಗಳನ್ನು ಮಾಡುತ್ತಿದ್ದರು.

ಅರ್ಥ:
ಅರಸ: ರಾಜ; ಉಪ್ಪವಡಿಸು: ಮಲಗು; ಎದ್ದು: ಮೇಲೇಳು; ವರ: ಶ್ರೇಷ್ಠ; ವೃಕೋದರ: ತೋಳದ ಹೊಟ್ಟೆಯುಳ್ಳವ (ಭೀಮ); ದೃಗು: ಕಣ್ಣು; ಸರಸಿರುಹ:ಕಮಲ; ಅರಳು: ವಿಕಸನವಾಗು; ಮೈ: ತನು; ಹರಿ: ವಿಷ್ಣು; ನೆನೆ: ಜ್ಞಾಪಿಸಿಕೋ; ನಿದ್ರೆ: ಶಯನ; ತಿಳಿ: ಎಚ್ಚರಾಗು, ಲಘುವಾಗಿರುವುದು; ಪರಿಜನ: ಬಂಧುಜನ; ಮುನಿ: ಋಷಿ; ನಿಕರ: ಗುಂಪು; ತರಣಿ: ಸೂರ್ಯ; ಸಂಧ್ಯಾ: ಮುಂಜಾನೆ; ಸಮಯ: ವೇಳೆ, ಕಾಲ; ಕೃತಿ: ಕೆಲಸ, ಕಾರ್ಯ; ಜಪ: ತಪಸ್ಸು; ಸಮಾಧಿ: ಏಕಾಗ್ರತೆ, ತನ್ಮಯತೆ;

ಪದವಿಂಗಡಣೆ:
ಅರಸನ್+ಉಪ್ಪವಡಿಸಿದನ್+ಎದ್ದನು
ವರ+ವೃಕೋದರನ್+ಅರ್ಜುನನ +ದೃಗು
ಸರಸಿರುಹವ್+ಅರಳಿದವು +ಮಾದ್ರೀ+ಸುತರು +ಮೈಮುರಿದು
ಹರಿಯ +ನೆನೆದರು +ನಿದ್ರೆ +ತಿಳಿದುದು
ಪರಿಜನಕೆ+ ಮುನಿ+ನಿಕರವಿದ್ದುದು
ತರಣಿ +ಸಂಧ್ಯಾಸಮಯ +ಸತ್ಕೃತಿ+ ಜಪ+ಸಮಾಧಿಯಲಿ

ಅಚ್ಚರಿ:
(೧) ಕಣ್ತೆರದರು ಎಂದು ಹೇಳಲು – ದೃಗು ಸರಸಿರುಹವರಳಿದವು

ನಿಮ್ಮ ಟಿಪ್ಪಣಿ ಬರೆಯಿರಿ