ಪದ್ಯ ೬೬: ಅರ್ಜುನನನ್ನು ಯಾರು ಹರಸಿದರು?

ಅರಸ ಕಳುಹಿದನಿಂದ್ರಸೂತನ
ನರಮನೆಗೆ ಬಂದನು ಧನಂಜಯ
ವೆರಸಿ ಪರ್ಣದ ಔಕಿಗೆಯಲಿ ಮುನೀಂದ್ರ ಮೇಳದಲಿ
ಅರಸಿ ಬಣ್ಣದ ಸೊಡರ ಬಲಿದಳು
ಹರಸಿದರು ಮುನಿವಧುಗಳಕ್ಷತೆ
ವೆರಸಿ ಗದುಗಿನ ವೀರನಾರಾಯಣನ ಮೈದುನನ (ಅರಣ್ಯ ಪರ್ವ, ೧೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಮಾತಲಿಯನ್ನು ಇಂದ್ರನ ಅರಮನೆಗೆ ಕಳುಹಿಸಿ, ಅರ್ಜುನನೊಡನೆ ಮುನಿಗಳ ಸಮೇತವಾಗಿ ತನ್ನ ಪರ್ಣಶಾಲೆಯ ಅಂಗಳಕ್ಕೆ ಬಂದನು. ದ್ರೌಪದಿಯು ಬಣ್ಣದ ದೀಪಗಳನ್ನು ಹಚ್ಚಿದಳು. ಮುನಿ ಪತ್ನಿಯರು ಅರ್ಜುನನನ್ನು ಹರಸಿದರು.

ಅರ್ಥ:
ಅರಸ: ರಾಜ; ಕಳುಹಿದ: ಬೀಳ್ಕೊಡು; ಸೂತ: ರಥವನ್ನು ಓಡಿಸುವವ; ಅರಮನೆ: ರಾಜರ ಆಲಯ; ಬಂದು: ಆಗಮಿಸು; ಪರ್ಣ: ಎಲೆ; ಚೌಕಿಗೆ:ಮನೆಯ ಒಳ ಅಂಗಳ, ಹಜಾರ; ಮುನಿ: ಋಷಿ; ಮೇಳ: ಗುಂಪು; ಅರಸಿ: ರಾಣಿ; ಬಣ್ಣ: ವರ್ಣ; ಸೊಡರು: ದೀಪ; ಬಲಿ: ಹೆಚ್ಚಾಗು; ಹರಸು: ಆಶೀರ್ವದಿಸು; ಮುನಿವಧು: ಋಷಿ ಪತ್ನಿ; ಅಕ್ಷತೆ: ಮಂತ್ರಿಸಿದ ಅಕ್ಕಿ; ಮೈದುನ: ತಂಗಿಯ ಗಂಡ;

ಪದವಿಂಗಡಣೆ:
ಅರಸ +ಕಳುಹಿದನ್+ಇಂದ್ರ+ಸೂತನನ್
ಅರಮನೆಗೆ +ಬಂದನು +ಧನಂಜಯವ್
ಎರಸಿ+ ಪರ್ಣದ+ ಔಕಿಗೆಯಲಿ +ಮುನೀಂದ್ರ +ಮೇಳದಲಿ
ಅರಸಿ+ ಬಣ್ಣದ +ಸೊಡರ +ಬಲಿದಳು
ಹರಸಿದರು +ಮುನಿವಧುಗಳ್+ಅಕ್ಷತೆವ್
ಎರಸಿ+ ಗದುಗಿನ+ ವೀರನಾರಾಯಣನ +ಮೈದುನನ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ವೀರನಾರಾಯಣನ ಮೈದುನನ
(೨) ಅರಸಿ, ಹರಸಿ, ಎರಸಿ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ