ಪದ್ಯ ೬೪: ಧರ್ಮಜನು ಅರ್ಜುನನಿಗೆ ಯಾವ ಆಶೆಯನ್ನು ತೋಡಿಕೊಂಡನು?

ಶಿವನಘಾಟದ ಶರ ಚತುರ್ದಶ
ಭುವನ ಭಂಜನವಿದು ಮದೀಯಾ
ಹವಕೆ ಹೂಣಿಗನಾಯ್ತಲೇ ಹೇರಾಳ ಸುಕೃತವಿದು
ಎವಗೆ ತೋರಿಸಬೇಹುದೀಶಾಂ
ಭವಮಹಾಸ್ತ್ರ ಪೌಢಕೇಳೀ
ವಿವರಣವ ಕಾಂಬರ್ತಿಯಾಯ್ತೆಂದನು ಧನಂಜಯಗೆ (ಅರಣ್ಯ ಪರ್ವ, ೧೩ ಸಂಧಿ, ೬೪ ಪದ್ಯ)

ತಾತ್ಪರ್ಯ:
ಅಸಮಾನವಾದ ಪಾಶುಪತಾಸ್ತ್ರವು ಹದಿನಾಲ್ಕು ಲೋಕಗಳನ್ನು ಸುಡಬಲ್ಲದು, ಇದು ನಮ್ಮ ಸಮರಸಾಧನವಾದುದು ಮಹಾಪುಣ್ಯವೇ ಸರಿ. ಈ ಪಾಶುಪತಾಸ್ತ್ರದ ಪ್ರೌಢ ವಿಧಾನವನ್ನು ನೋಡಬೇಕೆಂಬಾಶೆಯಾಗಿದೆ, ತೋರಿಸು ಎಂದು ಧರ್ಮಜನು ಕೇಳಿದನು.

ಅರ್ಥ:
ಶಿವ: ಶಂಕರ; ಅಘಾಟ: ಅದ್ಭುತ, ಅತಿಶಯ; ಶರ: ಬಾಣ; ಚತುರ್ದಶ: ಹದಿನಾಲ್ಕು; ಭುವನ: ಲೋಕ; ಭಂಜನ: ನಾಶಕಾರಿ; ಆಹವ: ಯುದ್ಧ; ಹೂಣಿಗ: ಬಿಲ್ಲುಗಾರ; ಹೇರಾಳ: ಬಹಳ; ಸುಕೃತ: ಒಳ್ಳೆಯ ಕಾರ್ಯ; ಎವಗೆ: ನನಗೆ; ತೋರಿಸು: ನೋಡು, ಗೋಚರಿಸು; ಮಹಾಸ್ತ್ರ: ದೊಡ್ಡ ಶಸ್ತ್ರ; ಪ್ರೌಢ: ಶ್ರೇಷ್ಠ; ವಿವರಣ: ವಿಚಾರ; ಕಾಂಬು: ನೋಡು;

ಪದವಿಂಗಡಣೆ:
ಶಿವನ್+ಅಘಾಟದ +ಶರ +ಚತುರ್ದಶ
ಭುವನ +ಭಂಜನವಿದು +ಮದೀಯ
ಆಹವಕೆ+ ಹೂಣಿಗನ್+ಆಯ್ತಲೇ +ಹೇರಾಳ +ಸುಕೃತವಿದು
ಎವಗೆ+ ತೋರಿಸಬೇಹುದ್+ಈಶಾಂ
ಭವ+ಮಹಾಸ್ತ್ರ +ಪೌಢ+ಕೇಳ್+ಈ
ವಿವರಣವ+ ಕಾಂಬರ್ತಿಯಾಯ್ತೆಂದನು +ಧನಂಜಯಗೆ

ಅಚ್ಚರಿ:
(೧) ಪಾಶುಪತಾಸ್ತ್ರದ ಹಿರಿಮೆ – ಶಿವನಘಾಟದ ಶರ ಚತುರ್ದಶ ಭುವನ ಭಂಜನವಿದು

ನಿಮ್ಮ ಟಿಪ್ಪಣಿ ಬರೆಯಿರಿ