ಪದ್ಯ ೬೨: ಧರ್ಮರಾಯನ ಸ್ಥಿತಿ ಹೇಗಿತ್ತು?

ಹೊಗಳಿನಿಲ್ಲದು ಜಿಹ್ವೆ ತೆಕ್ಕೆಯ
ಸೊಗಸಿನಲಿ ಮನ ದಣಿಯದೀಕ್ಷಣ
ಯುಗಳ ಬೀಯದು ನೋಡಿ ಪಾರ್ಥನ ಮಾತ ಸವಿಸವಿದು
ತೆಗೆದು ನಿಲ್ಲದು ಕರ್ಣಯುಗ ಸುರ
ನಗರಿಯುತ್ತಮ ಗಂಧಭರದಲಿ
ಮಗುಳದರಸನ ನಾಸಿಕವು ಭೂಪಾಲ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೬೨ ಪದ್ಯ)

ತಾತ್ಪರ್ಯ:
ಅರ್ಜುನನನ್ನು ಎಷ್ಟು ಹೊಗಳಿದರೂ ನಾಲಿಗೆಗೆ ತೃಪ್ತಿಯಿಲ್ಲ. ಎಷ್ಟು ಆಲಂಗಿಸಿದರೂ ಮನಸ್ಸಿಗೆ ತೃಪ್ತಿಯಿಲ್ಲ. ಮನದಣಿಯುವಂತೆ ಎಷ್ಟು ನೋಡಿದರೂ ಕಣ್ಣಿಗೆ ತೃಪ್ತಿಯಿಲ್ಲ. ಅರ್ಜುನನ ಮಾತನ್ನು ಎಷ್ಟು ಕೇಳಿದರೂ ಕಿವಿಗಳಿಗೆ ತೃಪ್ತಿಯಿಲ್ಲ. ಅರ್ಜುನನು ಲೇಪಿಸಿಕೊಂಡ ಸ್ವರ್ಗದ ಗಂಧದ ಪರಿಮಳವನ್ನು ಎಷ್ಟು ಮೂಸಿದರೂ ಮೂಗಿಗೆ ತೃಪ್ತಿಯಿಲ್ಲ.

ಅರ್ಥ:
ಹೊಗಳು: ಪ್ರಶಂಶಿಸು; ಜಿಹ್ವೆ: ನಾಲಗೆ; ತೆಕ್ಕೆ: ಅಪ್ಪುಗೆ; ಸೊಗಸು: ಚೆಲುವು; ಮನ; ಮನಸ್ಸು; ದಣಿವು: ಆಯಾಸ; ಈಕ್ಷಣ: ನೋಡು; ಯುಗಳ: ಎರದು; ಬೀಯ: ವ್ಯಯ, ಖರ್ಚು; ನೋಡಿ: ನೋಟ; ಮಾತು: ವಾಣಿ; ಸವಿ: ಸಿಹಿ; ತೆಗೆ: ಹೊರತರು; ನಿಲ್ಲು: ತಡೆ; ಕರ್ಣ: ಕಿವಿ; ಸುರನಗರಿ: ಅಮರಾವತಿ; ನಗರ: ಊರು; ಉತ್ತಮ: ಶ್ರೇಷ್ಠ; ಗಂಧ: ಪರಿಮಳ; ಭರ: ವೇಗ; ಮಗುಳು: ಮತ್ತೆ; ಅರಸ: ರಾಜ; ನಾಸಿಕ: ಮೂಗು; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೊಗಳಿ+ನಿಲ್ಲದು +ಜಿಹ್ವೆ +ತೆಕ್ಕೆಯ
ಸೊಗಸಿನಲಿ +ಮನ +ದಣಿಯದ್+ಈಕ್ಷಣ
ಯುಗಳ+ ಬೀಯದು+ ನೋಡಿ +ಪಾರ್ಥನ +ಮಾತ +ಸವಿಸವಿದು
ತೆಗೆದು +ನಿಲ್ಲದು +ಕರ್ಣಯುಗ +ಸುರ
ನಗರಿ+ಉತ್ತಮ +ಗಂಧ+ಭರದಲಿ
ಮಗುಳದ್+ಅರಸನ+ ನಾಸಿಕವು+ ಭೂಪಾಲ +ಕೇಳೆಂದ

ಅಚ್ಚರಿ:
(೧) ಜಿಹ್ವೆ, ನೋಟ, ಮಾತು, ಕರ್ಣ – ಇವಗಳ ಸಂತಸದ ಸ್ಥಿತಿಯನ್ನು ವರ್ಣಿಸುವ ಪದ್ಯ

ನಿಮ್ಮ ಟಿಪ್ಪಣಿ ಬರೆಯಿರಿ