ಪದ್ಯ ೫೯: ಅರ್ಜುನನ ಏಳಿಗೆಗೆ ಯಾರ ಆಶೀರ್ವಾದ ಕಾರಣ?

ಇದಿರುವಂದನು ಪದಯುಗದಲೆರ
ಗಿದರೆ ತೆಗೆದಪ್ಪಿದನು ಸನ್ಮಾ
ನದ ಸಘಾಡವನೇನನೆಂಬೆನು ಸಾವಿರಾಲಿಗಳ
ಹೊದರಿನಲಿ ಹೊದಿಸಿದನು ಮಿಗೆ ನಾ
ದಿದನು ಹರುಷಾಶ್ರುಗಳಲೀಯ
ಭ್ಯುದಯವೇ ನಿಮ್ಮಡಿಯ ಕರುಣ ಕಟಾಕ್ಷಕೃತಿಯೆಂದ (ಅರಣ್ಯ ಪರ್ವ, ೧೩ ಸಂಧಿ, ೫೯ ಪದ್ಯ)

ತಾತ್ಪರ್ಯ:
ನನ್ನೆದುರುಬಂದ ಸುರಪತಿಗೆ ನಾನು ನಮಸ್ಕರಿಸಿದೆನು, ಅವನು ನನ್ನನ್ನು ಮೇಲಕ್ಕೆತ್ತಿ ಅಪ್ಪಿಕೊಂಡು, ಸಾವಿರ ಕಣ್ಣುಗಳ ಸ್ನೇಹ ದೃಷ್ಟಿಯಿಂದ ನನ್ನನ್ನು ನೋಡಿದನು. ಅಣ್ಣಾ ಈ ನನ್ನ ಏಳಿಗೆಯು ನಿಮ್ಮ ಪಾದಗಳ ಕರುಣಕಟಾಕ್ಷದ ಕಾರ್ಯ ಎಂದು ಅರ್ಜುನನು ಧರ್ಮಜನಿಗೆ ಹೇಳಿದನು.

ಅರ್ಥ:
ಇದಿರು: ಎದುರು; ವಂದನು: ಬಂದನು; ಪದಯುಗ: ಚರಣದ್ವಯ; ಎರಗು: ನಮಸ್ಕರಿಸು; ಅಪ್ಪು: ಆಲಿಂಗನ; ಸನ್ಮಾನ: ವಿಶೇಷವಾದ ಗೌರವ; ಸಘಾಡ: ರಭಸ, ವೇಗ; ಸಾವಿರ: ಸಹಸ್ರ; ಆಲಿ: ಕಣ್ಣು; ಹೊದರು: ಗುಂಪು, ಸಮೂಹ; ಮಿಗೆ: ಅಧಿಕ; ನಾದು: ಒಲವು; ಹರುಷ: ಸಂತಸ; ಆಶ್ರು: ಕಣ್ಣಿರು; ಅಭ್ಯುದಯ: ಏಳಿಗೆ; ನಿಮ್ಮಡಿ: ನಿಮ್ಮ ಅಧೀನ; ಕರುಣ: ದಯೆ; ಕಟಾಕ್ಷ: ಅನುಗ್ರಹ; ಕೃತಿ: ಕಾರ್ಯ;

ಪದವಿಂಗಡಣೆ:
ಇದಿರು+ಬಂದನು+ ಪದಯುಗದಲ್+ಎರ
ಗಿದರೆ+ ತೆಗೆದ್+ಅಪ್ಪಿದನು +ಸನ್ಮಾ
ನದ +ಸಘಾಡವನ್+ಏನನೆಂಬೆನು +ಸಾವಿರ+ಆಲಿಗಳ
ಹೊದರಿನಲಿ+ ಹೊದಿಸಿದನು+ ಮಿಗೆ+ ನಾ
ದಿದನು +ಹರುಷ+ಆಶ್ರುಗಳಲ್+ಈ+
ಅಭ್ಯುದಯವೇ +ನಿಮ್ಮಡಿಯ +ಕರುಣ +ಕಟಾಕ್ಷ+ಕೃತಿಯೆಂದ

ಅಚ್ಚರಿ:
(೧) ಸ ಕಾರದ ಜೋಡಿ ಪದ – ಸನ್ಮಾನದ ಸಘಾಡ
(೨) ಪ್ರೀತಿಯನ್ನು ತೋರಿಸುವ ಪರಿ – ಸಾವಿರಾಲಿಗಳ ಹೊದರಿನಲಿ ಹೊದಿಸಿದನು ಮಿಗೆ ನಾ
ದಿದನು ಹರುಷಾಶ್ರುಗಳ್

ನಿಮ್ಮ ಟಿಪ್ಪಣಿ ಬರೆಯಿರಿ