ಪದ್ಯ ೫೮: ಅಮರಾವತಿಯಲ್ಲಿ ಯಾವ ವಾತಾವರಣವಿತ್ತು?

ಕವಿದುದಮರವ್ರಾತ ಕಾಂತಾ
ನಿವಹ ಹೊರವಂಟುದು ಸುರೇಂದ್ರನ
ಭವನದಲಿ ಗುಡಿನೆಗಹಿದವು ಸುರಪುರದ ಚೌಕದಲಿ
ತವತವಗೆ ತನಿವರಿವ ಜನದು
ತ್ಸವವನದನೇನೆಂಬೆನಂದಿನ
ದಿವಸದೊಸಗೆಯನಮರಲೋಕದಲರಸ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಅಣ್ಣಾ ಆ ದಿನದ ಸಂಭ್ರಮದ ಉತ್ಸವವನ್ನು ಕೇಳು, ದೇವತೆಗಳೂ, ಅಪ್ಸರೆಯರೂ ಹೊರಬಂದರು, ಊರಿನ ಚೌಕದಲ್ಲೂ ಇಂದ್ರನ ಮನೆಯ ಮೇಲೂ ಧ್ವಜಗಳನ್ನು ಹಾರಿಸಿದರು. ದೇವಸಂಘದ ಮಹೋತ್ಸಾಹವನ್ನು ಏನೆಂದು ಹೇಳಲಿ ಆ ದಿನ ಅಮರಾವತಿಯಲ್ಲಿ ಸಂಭ್ರಮದ ವಾತಾವರಣವಿತ್ತು.

ಅರ್ಥ:
ಕವಿದು: ಆವರಿಸು; ಅಮರ: ದೇವತೆ; ವ್ರಾತ: ಗುಂಪು; ಕಾಂತ: ಪ್ರಿಯಕರ; ನಿವಹ: ಗುಂಪು; ಹೊರವಂಟು: ತೆರಳು; ಸುರೇಂದ್ರ: ಇಂದ್ರ; ಭವನ: ಆಲಯ; ಗುಡಿ: ಧ್ವಜ; ನೆಗಹು: ಮೇಲೆತ್ತು; ಸುರಪುರ: ಅಮರಾವತಿ; ಚೌಕ: ಅಚ್ಚು ಕಟ್ಟಾದ; ತವತವಗೆ: ಅವರವರಿಗೆ; ತನಿ: ಸವಿಯಾದುದು; ಜನ: ಜನತೆ, ವ್ಯಕ್ತಿ; ಉತ್ಸವ: ಸಂಭ್ರಮ; ದಿವಸ: ದಿನ; ಒಸಗೆ: ಶುಭ, ಮಂಗಳಕಾರ್ಯ; ಅಮರಲೋಕ: ಸ್ವರ್ಗ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕವಿದುದ್+ಅಮರ+ವ್ರಾತ +ಕಾಂತಾ
ನಿವಹ+ ಹೊರವಂಟುದು+ ಸುರೇಂದ್ರನ
ಭವನದಲಿ+ ಗುಡಿ+ನೆಗಹಿದವು +ಸುರಪುರದ+ ಚೌಕದಲಿ
ತವತವಗೆ+ ತನಿವರಿವ +ಜನದ್
ಉತ್ಸವವನ್+ಅದನೇನೆಂಬೆನ್+ಅಂದಿನ
ದಿವಸದ್+ಒಸಗೆಯನ್+ಅಮರ+ಲೋಕದಲ್+ಅರಸ+ ಕೇಳೆಂದ

ಅಚ್ಚರಿ:
(೧) ಸುರಪುರ, ಅಮರಲೋಕ – ಸಮನಾರ್ಥಕ ಪದ
(೨) ಸುರೇಂದ್ರ, ಸುರಪುರ – ಸುರ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ