ಪದ್ಯ ೫೭: ಇಂದ್ರನು ಬಾಲೆಯರಿಗೆ ಏನು ಹೇಳಿದನು?

ಕೇಳಿದನು ಹರುಷಾಶ್ರು ಹೊದಿಸಿ ದು
ವಾಲಿಗಳ ಸಾವಿರವನುಬ್ಬಿದ
ಮೇಲುಮದದ ಸರೋಮಪುಳಕದ ಪೂರ್ಣಸೌಖ್ಯದಲಿ
ಬಾಲೆಯರ ಬರಹೇಳು ರತ್ನ ನಿ
ವಾಳಿಗಳ ತರಹೇಳೆನುತ ಸುರ
ಮೌಳಿ ಮಂಡಿತ ಚರಣನೆದ್ದನು ಬಂದನಿದಿರಾಗಿ (ಅರಣ್ಯ ಪರ್ವ, ೧೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ದೇವೇಂದ್ರನು ಸಂತೋಷದ ವಿಷಯವನ್ನು ಕೇಳಿ ಅವನ ಸಾವಿರ ಕಣ್ಣುಗಳು ಆನಂದಾಶ್ರುಗಳನ್ನು ಹೊರಸೂಸಿದವು. ಅವನು ರೋಮಾಂಚನಗೊಂಡು ಸಂಪೂರ್ಣ ಸಂತೋಷದಲ್ಲಿ ಮುಳುಗಿದನು. ರತ್ನದಾರತಿಗಳನ್ನು ತೆಗೆದುಕೊಂಡು ಯುವತಿಯರು ಬರಲಿ, ಅರ್ಜುನನಿಗೆ ದೃಷ್ಟಿತೆಗೆಯಲಿ ಎನ್ನುತ್ತಾ ದೇವೆಂದ್ರನು ಎದ್ದು ನನಗಿದಿರಾಗಿ ಬಂದನು.

ಅರ್ಥ:
ಕೇಳು: ಆಲಿಸು; ಹರುಷ: ಸಂತಸ; ಆಶ್ರು: ಕಣ್ಣಿರು; ಹೊದಿ: ಧರಿಸಿಕೊಳ್ಳು; ಆಲಿ: ಕಣ್ಣು; ಸಾವಿರ: ಸಹಸ್ರ; ಉಬ್ಬು: ಹಿಗ್ಗು; ಮೇಲು: ಹೆಚ್ಚಾದ; ಮದ: ಮತ್ತು, ಸೊಕ್ಕು; ರೋಮ: ಕೂದಲ; ಪುಳಕ: ರೋಮಾಂಚನ; ಪೂರ್ಣ: ತುಂಬ; ಸೌಖ್ಯ: ಸುಖ; ಬಾಲೆ: ಹೆಣ್ಣು; ಬರಹೇಳು: ಆಗಮಿಸು; ರತ್ನ: ಬೆಲೆಬಾಳುವ ಮಣಿ; ನಿವಾಳಿಸು: ದೃಷ್ಟಿತೆಗೆಯುವುದು; ತರಹೇಳು: ಬರೆಮಾಡು; ಸುರಮೌಳಿ: ಇಂದ್ರ; ಮಂಡಿತ: ಅಲಂಕೃತವಾದ; ಚರಣ: ಪಾದ; ಎದ್ದು; ಮೇಲೇಳು; ಬಂದು: ಆಗಮಿಸು; ಇದಿರು: ಎದುರು;

ಪದವಿಂಗಡಣೆ:
ಕೇಳಿದನು +ಹರುಷ+ಆಶ್ರು+ ಹೊದಿಸಿದುವ್
ಆಲಿಗಳ+ ಸಾವಿರವನ್+ಉಬ್ಬಿದ
ಮೇಲು+ಮದದ+ ಸರೋಮ+ಪುಳಕದ+ ಪೂರ್ಣ+ಸೌಖ್ಯದಲಿ
ಬಾಲೆಯರ+ ಬರಹೇಳು +ರತ್ನ+ ನಿ
ವಾಳಿಗಳ+ ತರಹೇಳ್+ಎನುತ +ಸುರ
ಮೌಳಿ+ ಮಂಡಿತ+ ಚರಣನೆದ್ದನು+ ಬಂದನ್+ಇದಿರಾಗಿ

ಅಚ್ಚರಿ:
(೧) ಇಂದ್ರನನ್ನು ಕರೆದ ಪರಿ – ಸುರಮೌಳಿ, ಆಲಿಗಳ ಸಾವಿರವನ್;
(೨) ಸಂತೋಷಗೊಂಡನೆಂದು ಹೇಳುವ ಪರಿ – ಹರುಷಾಶ್ರು ಹೊದಿಸಿ ದುವಾಲಿಗಳ ಸಾವಿರವನುಬ್ಬಿದ ಮೇಲುಮದದ ಸರೋಮಪುಳಕದ ಪೂರ್ಣಸೌಖ್ಯದಲಿ

ನಿಮ್ಮ ಟಿಪ್ಪಣಿ ಬರೆಯಿರಿ