ಪದ್ಯ ೫೪: ಭಟರು ಇಂದ್ರನಿಗೆ ಏನು ಹೇಳಿದರು?

ಕಟ್ಟುಗುಡಿಯನು ಖೋಡಿಯೇ ಜಗ
ಜಟ್ಟಿಗಳು ನುಗ್ಗಾಯ್ತಲೇ ನೀ
ನಟ್ಟ ಸಸಿ ಸುರಕುಜವಲೇ ಕೊಡದೇ ಮನೋರಥವ
ಕೆಟ್ಟುದಹಿತ ನಿವಾತಕವಚರ
ಥಟ್ಟು ಹುಡಿಹುಡಿಯಾಯ್ತು ದನುಜರ
ಹುಟ್ಟು ಉರಿದುದು ಜೀಯ ಚಿತ್ತೈಸೆಂದರಿಂದ್ರಂಗೆ (ಅರಣ್ಯ ಪರ್ವ, ೧೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಒಡೆಯಾ, ವಿಜಯ ಧ್ವಜವನ್ನೇರಿಸು, ದುರುಳತನದಿಂದ ಮೆರೆಯುತ್ತಿದ್ದ ದಾನವರ ಪರಾಕ್ರಮಿಗಳು ಅಳಿಸಿಹೋಗಿದ್ದಾರೆ, ನೀನ ನೆಟ್ಟ ಸಸಿ ಕಲ್ಪವೃಕ್ಷದ ಸಸಿ, ಅದು ಬಯಸಿದುದನ್ನು ನೀಡುತ್ತದೆ, ಶತ್ರುಗಳಾದ ನಿವಾತಕವಚರ ಸೈನ್ಯ ಪುಡಿಯಾಯಿತು, ಅಸುರರ ಹುಟ್ಟಡಗಿತು ಎಂದು ಭಟರು ಇಂದ್ರನಿಗೆ ಹೇಳಿದರು.

ಅರ್ಥ:
ಕಟ್ಟು: ಹೂಡು; ಗುಡಿ: ಧ್ವಜ, ಬಾವುಟ; ಖೋಡಿ: ದುರುಳತನ; ಜಗಜಟ್ಟಿ: ಪರಾಕ್ರಮಿ; ನುಗ್ಗು: ಚೂರಾಗು; ನಟ್ಟ: ಹೂಳು, ನಿಲ್ಲಿಸು; ಸಸಿ: ಎಳೆಯ ಗಿಡ, ಸಸ್ಯ; ಸುರ: ದೇವತೆ; ಕುಜ: ಗಿಡ, ಮರ; ಸುರಕುಜ: ದೇವತೆಗಳ ಮರ, ಕಲ್ಪವೃಕ್ಷ; ಕೊಡು: ನೀಡು; ಮನೋರಥ: ಆಸೆ, ಬಯಕೆ; ಕೆಟ್ಟು: ಹಾಳಾಗು; ಅಹಿತ: ವೈರಿ; ಥಟ್ಟು: ಗುಂಪು; ಹುಡಿ: ಪುಡಿ; ದನುಜ: ರಾಕ್ಷಸ; ಹುಟ್ಟು: ಜನನ; ಉರಿ: ಸುಡು; ಜೀಯ: ಒಡೆಯ; ಚಿತ್ತೈಸು: ಗಮನವಿಟ್ಟು ಕೇಳು; ಇಂದ್ರ: ಶಕ್ರ;

ಪದವಿಂಗಡಣೆ:
ಕಟ್ಟು+ಗುಡಿಯನು +ಖೋಡಿಯೇ +ಜಗ
ಜಟ್ಟಿಗಳು +ನುಗ್ಗಾಯ್ತಲೇ +ನೀ
ನಟ್ಟ +ಸಸಿ +ಸುರಕುಜವಲೇ +ಕೊಡದೇ +ಮನೋರಥವ
ಕೆಟ್ಟುದ್+ಅಹಿತ +ನಿವಾತಕವಚರ
ಥಟ್ಟು +ಹುಡಿಹುಡಿಯಾಯ್ತು +ದನುಜರ
ಹುಟ್ಟು +ಉರಿದುದು +ಜೀಯ +ಚಿತ್ತೈಸೆಂದರ್+ಇಂದ್ರಂಗೆ

ಅಚ್ಚರಿ:
(೧) ಅರ್ಜುನನ ಹಿರಿಮೆಯನ್ನು ಹೊಗಳುವ ಪರಿ – ನೀನಟ್ಟ ಸಸಿ ಸುರಕುಜವಲೇ ಕೊಡದೇ ಮನೋರಥವ

ನಿಮ್ಮ ಟಿಪ್ಪಣಿ ಬರೆಯಿರಿ