ಪದ್ಯ ೫೩: ದೇವತೆಗಳು ಎಲ್ಲಿಗೆ ಪ್ರಯಾಣ ಬೆಳೆಸಿದರು?

ಕಡುಹುವಗ್ಗದ ಕಾಲಕೇಯರ
ಗಡನವಡಗಿತು ಸುರರ ಬಲುಸೆರೆ
ಬಿಡಿಸಿದೆವು ಬಳಿಕಾಯ್ತು ಕಡುಸುಮ್ಮಾನ ಸುರಕುಲಕೆ
ಒಡೆದುದಿಳೆಯೆನೆ ಬಾಹುವಿನ ಬಿರು
ನುಡಿಯ ಕೈಗಳ ತುದಿವೆರಲ ಬೊ
ಬ್ಬಿಡಿಕೆಗಳ ಸುರಭಟರು ಹರಿದರು ಮುಂದೆ ಸುರಪುರಕೆ (ಅರಣ್ಯ ಪರ್ವ, ೧೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ಪರಾಕ್ರಮಶಾಲಿಗಳಾದ ಕಾಲಕೇಯರ ಸಮೂಹವು ನಾಶವಾಯಿತು. ಅವರ ಸೆರೆಯಲ್ಲಿದ್ದ ದೇವತೆಗಳ ಬಂಧನವು ಕೊನೆಗೊಂಡಿತು, ದೇವತೆಗಳ ಸಂತೋಷವು ಹೆಚ್ಚಿತು, ಅವರು ತೋಳು ತಟ್ಟಿದ ಶಬ್ದ, ಕೇಕೆ, ಚಪ್ಪಾಳೆಗಳು ಭೂಮಿಯೊಡೆಯುವುದೋ ಎಂಬಂತೆ ತೋರಿದವು. ದೇವತೆಗಳ ಸೈನಿಕರು ಅಮರಾವತಿಗೆ ತಮ್ಮ ಪ್ರಯಾಣ ಬೆಳೆಸಿದರು.

ಅರ್ಥ:
ಕಡುಹು: ಪರಾಕ್ರಮ, ಸಾಹಸ; ಅಗ್ಗ: ಶ್ರೇಷ್ಠ; ಗಡಣ: ಗುಂಪು; ಅಡಗು: ಮುಚ್ಚು; ಸುರ: ದೇವತೆ; ಬಲು: ಬಹಳ; ಸೆರೆ: ಬಂಧನ; ಬಿಡಿಸು: ಕಳಚು, ಸಡಿಲಿಸು; ಬಳಿಕ: ನಂತರ; ಕಡು: ವಿಶೇಷ, ಅಧಿಕ; ಸುಮ್ಮಾನ: ಸಂತೋಷ, ಹಿಗ್ಗು; ಸುರ: ದೇವತೆ; ಕುಲ: ವಂಶ; ಒಡೆ: ಬಿರುಕುಬಿಡು; ಇಳೆ: ಭೂಮಿ; ಬಾಹು: ಭುಜ; ಬಿರುನುಡಿ: ಒರಟಾದ ಮಾತು; ಕೈ: ಹಸ್ತ; ತುದಿ: ಅಗ್ರಭಾಗ; ವೆರಳ: ಬೆರಳು; ಬೊಬ್ಬಿಡು: ಗರ್ಜಿಸು; ಸುರ: ದೇವತೆ; ಭಟ: ಸೈನಿಕ; ಹರಿ: ಓಡು, ಧಾವಿಸು; ಸುರಪುರ: ಸ್ವರ್ಗ, ಅಮರಾವತಿ;

ಪದವಿಂಗಡಣೆ:
ಕಡುಹುವ್+ಅಗ್ಗದ +ಕಾಲಕೇಯರ
ಗಡನವ್+ಅಡಗಿತು +ಸುರರ +ಬಲು+ಸೆರೆ
ಬಿಡಿಸಿದೆವು+ ಬಳಿಕಾಯ್ತು +ಕಡುಸುಮ್ಮಾನ+ ಸುರಕುಲಕೆ
ಒಡೆದುದ್+ಇಳೆಯೆನೆ +ಬಾಹುವಿನ+ ಬಿರು
ನುಡಿಯ +ಕೈಗಳ +ತುದಿವೆರಳ +ಬೊ
ಬ್ಬಿಡಿಕೆಗಳ+ ಸುರಭಟರು +ಹರಿದರು +ಮುಂದೆ +ಸುರಪುರಕೆ

ಅಚ್ಚರಿ:
(೧) ಸುರಕುಲ, ಸುರಪುರ, ಸುರಭಟ – ಪದಗಳ ಬಳಕೆ
(೨) ಚಪ್ಪಾಳೆ ಎಂದು ಹೇಳಲು – ಕೈಗಳ ತುದಿವೆರಳ ಬೊಬ್ಬಿಡಿಕೆ

ನಿಮ್ಮ ಟಿಪ್ಪಣಿ ಬರೆಯಿರಿ