ಪದ್ಯ ೫೨: ಯಾರು ಸ್ವರ್ಗಕ್ಕೆ ಪ್ರಯಾಣ ಬೆಳೆಸಿದರು?

ಜೀಯ ವಿಗಡ ಬ್ರಹ್ಮಶರ ವಿಂ
ದ್ರಾಯುಧದ ಮುಂಗುಡಿಯಲಿರಿದುದು
ಮಾಯಕಾರರ ಮೋಹರವನುಬ್ಬಟೆ ಚತುರ್ಬಲವ
ಹೋಯಿತಸುರರ ಸೇನೆ ಸರಿದುದು
ನಾಯಕರು ನಾನಾ ದಿಗಂತ
ಸ್ಥಾಯಿಗಳು ಸಗ್ಗಾದಿ ಭೋಗಕೆ ಭೂಪ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಬ್ರಹ್ಮಾಸ್ತ್ರವು, ಇಂದ್ರಾಸ್ತ್ರವು ಮುಂಗುಡಿಯಲ್ಲಿ ಶತ್ರುಗಳನ್ನು ಮರ್ದಿಸಿತು. ಮಾಯಾಯುದ್ಧ ವಿಶಾರದರಾದ ಅಸುರರ ಚತುರಂಗ ಸೈನ್ಯವು ಸೋತಿತು. ದಂಡನಾಯಕರೂ, ಪ್ರಮುಖರೂ ಅನೇಕ ದಿಕ್ಕುಗಳಲ್ಲಿದ್ದವರೆಲ್ಲರೂ ಸ್ವರ್ಗಕ್ಕೆ ಪ್ರಯಾಣ ಬೆಳೆಸಿದರು.

ಅರ್ಥ:
ಜೀಯ: ಒಡೆಯ; ವಿಗಡ: ಶೌರ್ಯ, ಪರಾಕ್ರಮ; ಶರ: ಬಾಣ; ಆಯುಧ: ಶಸ್ತ್ರ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಇರಿ: ಚುಚ್ಚು; ಮಾಯ: ಗಾರುಡಿ, ಇಂದ್ರಜಾಲ; ಮೋಹರ: ಯುದ್ಧ; ಉಬ್ಬಟೆ: ಅತಿಶಯ; ಬಲ: ಸೈನ್ಯ; ಹೋಯಿತು: ನಾಶವಾಗು; ಅಸುರ: ರಾಕ್ಷಸ; ಸೇನೆ: ಸೈನ್ಯ; ಸರಿ: ಹೋಗು, ಗಮಿಸು; ನಾಯಕ: ಒಡೆಯ; ನಾನಾ: ಹಲವಾರು; ದಿಗಂತ: ದಿಕ್ಕು; ಸ್ಥಾಯಿ: ಸ್ಥಿರವಾಗಿರುವುದು; ಸಗ್ಗ: ಸ್ವರ್ಗ; ಭೋಗ: ಸುಖವನ್ನು ಅನುಭವಿಸುವುದು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಜೀಯ +ವಿಗಡ +ಬ್ರಹ್ಮಶರವ್ +
ಇಂದ್ರಾಯುಧದ +ಮುಂಗುಡಿಯಲ್+ಇರಿದುದು
ಮಾಯಕಾರರ +ಮೋಹರವನ್+ಉಬ್ಬಟೆ +ಚತುರ್ಬಲವ
ಹೋಯಿತಸುರರ+ ಸೇನೆ +ಸರಿದುದು
ನಾಯಕರು +ನಾನಾ +ದಿಗಂತ
ಸ್ಥಾಯಿಗಳು +ಸಗ್ಗಾದಿ +ಭೋಗಕೆ+ ಭೂಪ+ ಕೇಳೆಂದ

ಅಚ್ಚರಿ:
(೧) ಅಳಿದರು ಎಂದು ಹೇಳಲು – ಸರಿದುದು ನಾಯಕರು ನಾನಾ ದಿಗಂತಸ್ಥಾಯಿಗಳು ಸಗ್ಗಾದಿ ಭೋಗಕೆ

ನಿಮ್ಮ ಟಿಪ್ಪಣಿ ಬರೆಯಿರಿ