ಪದ್ಯ ೫೧: ಅರ್ಜುನನ ಬಾಣಗಳು ಶತ್ರುಗಳ ಮೇಲೆ ಯಾವ ಪ್ರಭಾವ ಮಾಡಿದವು?

ಮುರಿದುದಸುರರ ಮಾಯೆ ಕಾಹಿ ನೊ
ಳೆರೆದ ರಸದವೊಲವರು ನಿಜದಲಿ
ತರುಬಿ ನಿಂದರು ತೂಳಿದರು ಗಜಹಯರಥೌಘದಲಿ
ತರಿದವುಗಿದವು ತುಂಡಿಸಿದವಗಿ
ದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿವ್ರಜವ (ಅರಣ್ಯ ಪರ್ವ, ೧೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ಅಸುರರ ಮಾಯೆಯು ಮಾಯವಾಗಲು, ಅಚ್ಚಿಗೆ ಹಾಕಿದ ರಸದಂತೆ ರಾಕ್ಶಸರ ನಿಜ ಸ್ವರೂಪವನ್ನು ಪಡೆದರು. ಚತುರಂಗ ಸೈನ್ಯದೊಡನೆ ನನ್ನನ್ನು ತಡೆದು ನಿಲ್ಲಿಸಿದರು. ನಾನು ಪ್ರಯೋಗಿಸಿದ ಬಾಣಗಳು ಶತ್ರು ರಾಕ್ಷಸರನ್ನು ತರಿದವು,ಚುಚ್ಚಿದವು, ಕಡಿದವು, ಅಪ್ಪಳಿಸಿದವು, ಸೀಳಿದವು, ಕೊಯ್ದವು ಕೊರೆದು ಕುಪ್ಪಳಿಸಿದವು.

ಅರ್ಥ:
ಮುರಿ: ಸೀಳು; ಅಸುರ: ರಾಕ್ಷಸ; ಮಾಯೆ: ಇಂದ್ರಜಾಲ, ಗಾರುಡಿ; ಕಾಹಿ: ರಕ್ಷಿಸುವವ; ಎರೆ: ಸುರಿ, ಹೊಯ್ಯು; ರಸ: ಸಾರ; ನಿಜ: ತನ್ನ, ದಿಟ; ತರುಬು: ತಡೆ, ನಿಲ್ಲಿಸು; ತೂಳು: ಆವೇಶ, ಉನ್ಮಾದ; ಗಜ: ಆನೆ; ಹಯ: ಕುದುರೆ; ರಥ: ಬಂಡಿ; ಔಘ: ಗುಂಪು; ತರಿ: ಕಡಿ, ಕತ್ತರಿಸು; ಉಗಿ: ಹೊರಹಾಕು; ತುಂಡಿಸು: ಕತ್ತರಿಸು; ಎರಗು: ಬಾಗು; ಸೀಳು: ಕತ್ತರಿಸು; ಕೊಯ್ದು: ಕತ್ತರಿಸು; ಕೊರೆ: ಚೂರು, ಇರಿ; ಕುಪ್ಪಳಿಸು: ಜಿಗಿದು ಬೀಳು; ನಿಮಿಷ: ಕ್ಷಣ, ಕಾಲದ ಪ್ರಮಾಣ; ಶರ: ಬಾಣ; ಅರಿ: ವೈರಿ; ವ್ರಜ: ಗುಂಪು;

ಪದವಿಂಗಡಣೆ:
ಮುರಿದುದ್+ಅಸುರರ+ ಮಾಯೆ +ಕಾಹಿನೊಳ್
ಎರೆದ+ ರಸದವೊಲ್+ಅವರು+ ನಿಜದಲಿ
ತರುಬಿ+ ನಿಂದರು+ ತೂಳಿದರು+ ಗಜ+ಹಯ+ರಥ+ಔಘದಲಿ
ತರಿದವ್+ಉಗಿದವು +ತುಂಡಿಸಿದವ್+ಅಗಿದ್
ಎರಗಿದವು +ಸೀಳಿದವು +ಕೊಯ್ದವು
ಕೊರೆದು +ಕುಪ್ಪಳಿಸಿದವು+ ನಿಮಿಷಕೆ+ ಶರವ್+ಅರಿ+ವ್ರಜವ

ಅಚ್ಚರಿ:
(೧) ಆಯುಧಗಳ ಪ್ರಭಾವ – ತರಿದವುಗಿದವು ತುಂಡಿಸಿದವಗಿದೆರಗಿದವು ಸೀಳಿದವು ಕೊಯ್ದವು
ಕೊರೆದು ಕುಪ್ಪಳಿಸಿದವು ನಿಮಿಷಕೆ ಶರವರಿವ್ರಜವ

ನಿಮ್ಮ ಟಿಪ್ಪಣಿ ಬರೆಯಿರಿ