ಪದ್ಯ ೪೯: ಕಾಲಕೇಯರ ಯುದ್ಧದ ಪರಿ ಹೇಗಿತ್ತು?

ಬೀಸಿದರು ಬಿರುಗಾಳಿಯಾಗಿ ಮ
ಹಾ ಸಮುದ್ರದ ನೂಕು ತೆರೆಯಲಿ
ಬೇಸರಿಸಿದರು ಹುರಿದರವನಿಯನಗ್ನಿ ರೂಪದಲಿ
ಆಸುರದ ತಮವಾಗಿ ರವಿಶತ
ದಾಸರಿನ ಬಿಸಿಲಾಗಿ ಮಾಯಾ
ಭ್ಯಾಸಿಗಳು ಮೋಹಿಸಿದರದನೇವಣ್ಣಿಸುವೆನೆಂದ (ಅರಣ್ಯ ಪರ್ವ, ೧೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕಾಲಕೇಯರು ಬಿರುಗಾಳಿಯಾಗಿ ಬೀಸಿದರು. ಸಮುದ್ರದ ತೆರೆಯಾಗಿ ನನ್ನನ್ನು ಹಿಂದಕ್ಕೆ ತಳ್ಳಿ ಬೇಸರಿಸಿದರು. ಅಗ್ನಿ ರೂಪದಿಂದ ಭೂಮಿಯನ್ನೇ ಹುರಿದರು. ಒಮ್ಮೆ ಕಾಳಗತ್ತಲೆಯಾಗಿ, ಒಮ್ಮೆ ನೂರು ಸೂರ್ಯರ ಬಿಸಿಲನ್ನು ಬೀರಿ ಮಾಯಾಯುದ್ಧವನ್ನು ಮಾಡಿದರು. ಅದನ್ನು ನಾನು ಹೇಗೆ ವರ್ಣಿಸಲಿ ಎಂದು ಅರ್ಜುನನು ವಿವರಿಸಿದನು.

ಅರ್ಥ:
ಬೀಸು: ತೂಗುವಿಕೆ, ಹರಹು; ಬಿರುಗಾಳಿ: ಜೋರಾದ ಗಾಳಿ; ಗಾಳಿ: ವಾಯು; ಮಹಾ: ದೊಡ್ಡ; ಸಮುದ್ರ: ಸಾಗರ; ನೂಕು: ತಳ್ಳು; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ಬೇಸರ: ಬೇಜಾರು; ಹುರಿ: ಕಾಯಿಸು, ಬಾಡಿಸು; ಅವನಿ: ಭೂಮಿ; ಅಗ್ನಿ: ಬೆಂಕಿ; ರೂಪ: ಆಕಾರ; ಆಸುರ: ಭಯಂಕರ; ತಮ: ಅಂಧಕಾರ; ರವಿ: ಸೂರ್ಯ; ಶತ: ನೂರು; ಆಸರು: ದಣಿವು, ಬಳಲಿಕೆ; ಬಿಸಿಲು: ಶಾಕ; ಮಾಯೆ: ಇಂದ್ರಜಾಲ; ಅಭ್ಯಾಸ: ರೂಢಿ

ಪದವಿಂಗಡಣೆ:
ಬೀಸಿದರು +ಬಿರುಗಾಳಿಯಾಗಿ +ಮ
ಹಾ +ಸಮುದ್ರದ +ನೂಕು +ತೆರೆಯಲಿ
ಬೇಸರಿಸಿದರು +ಹುರಿದರ್+ಅವನಿಯನ್+ಅಗ್ನಿ +ರೂಪದಲಿ
ಆಸುರದ +ತಮವಾಗಿ +ರವಿಶತದ್
ಆಸರಿನ+ ಬಿಸಿಲಾಗಿ +ಮಾಯಾ
ಭ್ಯಾಸಿಗಳು+ ಮೋಹಿಸಿದರ್+ಅದನೇವಣ್ಣಿಸುವೆನೆಂದ

ಅಚ್ಚರಿ:
(೧) ಕಾಲಕೇಯರ ಯುದ್ಧದ ಪರಿ – ಬೀಸಿದರು ಬಿರುಗಾಳಿಯಾಗಿ ಮಹಾ ಸಮುದ್ರದ ನೂಕು ತೆರೆಯಲಿ ಬೇಸರಿಸಿದರು ಹುರಿದರವನಿಯನಗ್ನಿ ರೂಪದಲಿ

ನಿಮ್ಮ ಟಿಪ್ಪಣಿ ಬರೆಯಿರಿ