ಪದ್ಯ ೪೮: ಕಾಲಕೇಯರ ಬಲ ಎಂತಹುದು?

ಕೆರಳಿತಲ್ಲಿ ನಿವತಕವಚರ
ಮರಣ ವಾರ್ತೆಯ ಕೇಳಿದಸುರರು
ಪುರದ ಬಾಹೆಯೊಳಡ್ಡಹಾಯ್ದರು ತರುಬಿದರು ರಥವ
ಅರಸ ಚಿತ್ತೈಸವದಿರಲಿ ಪರಿ
ಪರಿಯ ಮಾಯಾರಚನೆ ರಂಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ (ಅರಣ್ಯ ಪರ್ವ, ೧೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ನಿವಾತ ಕವಚರ ಸಾವನ್ನು ಕೇಳಿದ ಕಾಲಕೇಯರು ಕೆರಳಿದರು. ನಾನು ಅವರ ಊರ ಬಳಿ ಬರುತ್ತಿದ್ದಂತೆ ನನ್ನನ್ನು ತಡೆಯಲು ನನ್ನ ರಥಕ್ಕೆ ಅಡ್ಡ ಬಂದರು. ಅಣ್ಣ ಕೇಳು, ಅವರು ಮಾಯಾ ಯುದ್ಧ ವಿಶಾರದರು. ನಿವಾತಕವಚರಿಗಿಂತ ಎರಡು ಸಾವಿರ ಪಟ್ಟು ಬಲ ಶಾಲಿಗಳು.

ಅರ್ಥ:
ಕೆರಳು: ರೇಗು, ಕನಲು; ಮರಣ: ಸಾವು; ವಾರ್ತೆ: ಸುದ್ದಿ; ಕೇಳಿ: ಆಲಿಸು; ಅಸುರ: ದಾನವ; ಪುರ: ಊರು; ಬಾಹೆ: ಹೊರಗೆ; ಹಾಯ್ದು: ಹೊಡೆ; ತರುಬು: ತಡೆ, ನಿಲ್ಲಿಸು; ರಥ: ಬಂಡಿ; ಅರಸ: ರಾಜ; ಚಿತ್ತೈಸು: ಆಲಿಸು; ಅವದಿರು: ಅವರು; ಪರಿ: ರೀತಿ, ಬಗೆ; ಮಾಯೆ: ಗಾರುಡಿ, ಇಂದ್ರಜಾಲ; ರಚನೆ: ನಿರ್ಮಾಣ, ಸೃಷ್ಟಿ; ರಂಜಿಸು: ಹೊಳೆ, ಪ್ರಕಾಶಿಸು; ಸಾವಿರ: ಸಹಸ್ರ; ಮಡಿ: ಪಟ್ಟು; ಮಿಗಿಲು: ಹೆಚ್ಚು;

ಪದವಿಂಗಡಣೆ:
ಕೆರಳಿತಲ್ಲಿ+ ನಿವಾತಕವಚರ
ಮರಣ +ವಾರ್ತೆಯ +ಕೇಳಿದ್+ಅಸುರರು
ಪುರದ +ಬಾಹೆಯೊಳ್+ಅಡ್ಡ+ಹಾಯ್ದರು+ ತರುಬಿದರು+ ರಥವ
ಅರಸ+ ಚಿತ್ತೈಸ್+ಅವದಿರಲಿ+ ಪರಿ
ಪರಿಯ +ಮಾಯಾರಚನೆ+ ರಂಜಿಸಿತ್
ಎರಡು+ ಸಾವಿರ+ ಮಡಿಗೆ +ಮಿಗಿಲು +ನಿವಾತ+ಕವಚರಿಗೆ

ಅಚ್ಚರಿ:
(೧) ನಿವಾತಕವಚ – ೧, ೬ ಸಾಲಿನ ಕೊನೆಯ ಪದ
(೨) ಕಾಲಕೇಯರ ಬಲದ ಸಾಮರ್ಥ್ಯ – ಪರಿಪರಿಯ ಮಾಯಾರಚನೆ ರಂಜಿಸಿ
ತೆರಡು ಸಾವಿರ ಮಡಿಗೆ ಮಿಗಿಲು ನಿವಾತಕವಚರಿಗೆ

ನಿಮ್ಮ ಟಿಪ್ಪಣಿ ಬರೆಯಿರಿ