ಪದ್ಯ ೪೦: ಅರ್ಜುನನು ಯಾವ ಬಾಣವನ್ನು ಪುಡಿಮಾಡಿದನು?

ಲಟಕಟಿಸುವಾ ಮುರು ಕೋಟಿಯ
ಭಟರು ಕರೆದರು ಕಲುವಳೆಯನು
ಬ್ಬಟೆಯನದನೇನೆಂಬೆನವದಿರ ಸಮರ ಸಂಭ್ರಮವ
ಕುಟಿಲತನದಿಂದೊದಗಿದರು ಕಲು
ಕುಟಿಗಶರ ಶತಕೋಟಿಯಲಿ ಪಡಿ
ಭಟ ಬಲವ ಬೆದರಿಸಿದೆ ಚಿತ್ತೈಸೆಂದನಾ ಪಾರ್ಥ (ಅರಣ್ಯ ಪರ್ವ, ೧೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ಮುಂದುವರೆಸುತ್ತಾ, ಮೂರು ಕೋಟಿ ಯೋಧರು ಕಲ್ಲಿನ ಮಳೆಯನ್ನು ಸುರಿಸಿದರು. ಅದರ ಆರ್ಭಟವನ್ನು ನಾನು ಹೇಗೆ ಹೇಳಲಿ. ಅವರ ಈ ಕುಟಿಲ ಯುದ್ಧವನ್ನು ನಾನು ಕಲ್ಲು ಮುರಿಯುವ ಅಸಂಖ್ಯಾತ ಬಾಣಗಳನ್ನು ಬಿಟ್ಟು ಅವರನ್ನು ಮತ್ತು ಅವರು ಬಿಟ್ಟ ಕಲ್ಲುಗಳನ್ನು ಪುಡಿಮಾಡಿದೆನು.

ಅರ್ಥ:
ಲಟಕಟ: ಚಕಿತನಾಗು; ಭಟ: ಸೈನಿಕರು; ಕರೆ: ಬರೆಮಾಡು; ಕಲುವಳೆ: ಕಲ್ಲಿನ ಮಳೆ; ಉಬ್ಬಟೆ: ಅತಿಶಯ; ಅವದಿರ: ಅವರು, ಆಷ್ಟು ಜನ; ಸಮರ: ಯುದ್ಧ; ಸಂಭ್ರಮ: ಉತ್ಸಾಹ, ಸಡಗರ; ಕುಟಿಲ: ಮೋಸ; ಒದಗು: ದೊರೆತುದು; ಕಲು: ಕಲ್ಲು; ಕಲುಕುಟಿಗ: ಕಲ್ಲನ್ನು ಪುಡಿಮಾಡು; ಶರ: ಬಾಣ; ಶತ: ನೂರು; ಪಡಿಭಟ: ಎದುರಾಳಿ ಸೈನಿಕರು; ಬಲ: ಪರಾಕ್ರಮ, ಶಕ್ತಿ; ಬೆದರಿಸು: ಹೆದರಿಸು; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಲಟಕಟಿಸುವಾ+ ಮೂರು+ ಕೋಟಿಯ
ಭಟರು+ ಕರೆದರು +ಕಲುವಳೆಯನ್
ಉಬ್ಬಟೆಯನ್+ಅದನೇನ್+ಎಂಬೆನ್+ಅವದಿರ +ಸಮರ +ಸಂಭ್ರಮವ
ಕುಟಿಲತನದಿಂದ್+ಒದಗಿದರು +ಕಲು
ಕುಟಿಗ+ಶರ+ ಶತಕೋಟಿಯಲಿ +ಪಡಿ
ಭಟ +ಬಲವ +ಬೆದರಿಸಿದೆ+ ಚಿತ್ತೈಸೆಂದನಾ +ಪಾರ್ಥ

ಅಚ್ಚರಿ:
(೧) ಕಲುವಳೆ, ಕಲುಕುಟಿಗ – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ