ಪದ್ಯ ೩೭: ಅರ್ಜುನನು ರಾಕ್ಷಸರ ಮೇಲೆ ಹೇಗೆ ದಾಳಿ ಮಾಡಿದನು?

ಕರೆದರವದಿರು ಕಲ್ಪಮೇಘದ
ಬಿರುವಳೆಯವೊಲು ಸರಳನನಿತುವ
ತರಿದು ತೆತ್ತಿಸಿದೆನು ತದಂಗೋಪಾಂಗದಲಿ ಸರಳ
ಅರಿಯರೆನ್ನನು ಶಕ್ರನೆಂದೇ
ತರುಬಿ ದಿಙ್ಮಂಡಲವ ಮುಸುಕಿದ
ರಿರಿತಕಂಜದ ದಿಟ್ಟನಾವನು ಸುರರ ಥಟ್ಟಿನಲಿ (ಅರಣ್ಯ ಪರ್ವ, ೧೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕಲ್ಪಾಂತಕಾಲದ ಮೇಘಗಲು ಸುರಿಸುವ ಬಿರುಮಳೆಯಂತೆ ಸುರಿಯುತ್ತಿದ್ದ ಅಸುರರ ಬಾಣಗಳನ್ನು ಕತ್ತರಿಸಿದೆನು. ಅವರೆಲ್ಲರ ಮೈಯಲ್ಲೂ ಬಾಣಗಳು ನಡುವಂತೆ ಮಾಡಿದೆನು. ಅವರು ನನ್ನನ್ನು ಇಂದ್ರನೆಂದೇ ತಿಳಿದು ನನ್ನನ್ನು ನಿಲ್ಲಿಸಿ ದಿಕ್ಕುಗಳೆಲ್ಲವನ್ನೂ ಬಾಣಗಳಿಂದ ತುಂಬಿದರು. ಅವರ ಏಟಿಗೆ ಹೆದರದಿರುವ ದೇವತೆಗಳೇ ಇಲ್ಲ.

ಅರ್ಥ:
ಕರೆ: ಬರೆಮಾಡು; ಅವದಿರು: ಅವರು; ಕಲ್ಪ: ಬ್ರಹ್ಮನ ಒಂದು ದಿವಸ, ಪ್ರಳಯ; ಮೇಘ: ಮೋಡ; ಬಿರುವಳೆ: ಜೋರಾದ ಮಳೆ; ಸರಳ: ಬಾಣ; ಅನಿತು: ಅಷ್ಟು; ತರಿ: ಕಡಿ, ಕತ್ತರಿಸು; ತೆತ್ತಿಸು: ಜೋಡಿಸು, ಕೂಡಿಸು; ಅಂಗೋಪಾಂಗ: ದೇಹದ ಭಾಗ; ಸರಳ: ಬಾಣ; ಅರಿ: ತಿಳಿ; ಶಕ್ರ: ಇಂದ್ರ; ತರುಬು: ತಡೆ, ನಿಲ್ಲಿಸು, ದೂಡು; ದಿಙ್ಮಂಡಲ: ಎಲ್ಲಾ ದಿಕ್ಕು; ಮುಸುಕು: ಆವರಿಸು; ಇರಿ: ತಿವಿ, ಚುಚ್ಚು; ಅಂಜು: ಹೆದರು; ದಿಟ್ಟ: ಧೀರ; ಸುರ: ದೇವತೆ; ಥಟ್ಟು: ಪಕ್ಕ, ಕಡೆ, ಗುಂಪು;

ಪದವಿಂಗಡಣೆ:
ಕರೆದರ್+ಅವದಿರು +ಕಲ್ಪ+ಮೇಘದ
ಬಿರುವಳೆಯವೊಲು +ಸರಳನ್+ಅನಿತುವ
ತರಿದು+ ತೆತ್ತಿಸಿದೆನು +ತದ್+ಅಂಗೋಪಾಂಗದಲಿ+ ಸರಳ
ಅರಿಯರ್+ಎನ್ನನು +ಶಕ್ರನೆಂದೇ
ತರುಬಿ+ ದಿಙ್ಮಂಡಲವ+ ಮುಸುಕಿದರ್
ಇರಿತಕ್+ಅಂಜದ +ದಿಟ್ಟನಾವನು+ ಸುರರ+ ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಲ್ಪಮೇಘದ ಬಿರುವಳೆಯವೊಲು
(೨) ಸರಳ ಪದದ ಬಳಕೆ – ಸರಳನನಿತುವ ತರಿದು ತೆತ್ತಿಸಿದೆನು ತದಂಗೋಪಾಂಗದಲಿ ಸರಳ

ನಿಮ್ಮ ಟಿಪ್ಪಣಿ ಬರೆಯಿರಿ