ಏನನೆಂಬೆನು ಜೀಯ ಬಳಿಕಾ
ದಾನವಾಧಿಪರುಬ್ಬೆಯನು ಸುರ
ಮಾನವರು ತರಹರಿಸಲಳವೇ ಖಳರ ಘಲ್ಲಣೆಯ
ವೈನತೇಯನ ಪಕ್ಷಹತ ಪವ
ಮಾನನಂತಿರೆ ಭಟರ ಸುಯ್ಲಿನೊ
ಳಾ ನಿರೂಢಿಯ ಸುರರು ಹಾರಿತು ಸೂಸಿ ದೆಸೆದೆಸೆಗೆ (ಅರಣ್ಯ ಪರ್ವ, ೧೩ ಸಂಧಿ, ೩೫ ಪದ್ಯ)
ತಾತ್ಪರ್ಯ:
ಅಣ್ಣಾ ನಾನು ಏನೆಂದು ಹೇಳಲಿ, ಆ ರಾಕ್ಷಸ ವೀರರ ರಭಸವನ್ನು ದೇವತೆಗಳು, ಮನುಷ್ಯರು ತಡೆದುಕೊಳ್ಳಲು ಸಾಧ್ಯವೇ? ಗರುಡನ ರೆಕ್ಕೆಯ ಬಡಿತಕ್ಕೆ ಸದು ಮಾಡುತ್ತಾ ಬರುವ ಗಾಳಿಯೋ ಎಂಬಂತೆ ರಾಕ್ಷಸವೀರರ ನಿಶ್ವಾಸಕ್ಕೆ ದೇವತೆಗಳು ದಿಕ್ಕಾಪಾಲಾಗಿ ಓಡಿದರು.
ಅರ್ಥ:
ಜೀಯ: ಒಡೆಯ; ಬಳಿಕ: ನಂತರ; ದಾನವ: ರಾಕ್ಷಸ; ಅಧಿಪ: ರಾಜ; ಉಬ್ಬೆ: ರಭಸ, ಉದ್ವೇಗ; ಸುರ: ದೇವತೆ; ಮಾನವ: ನರ; ತರಹರಿಸು: ತಡಮಾಡು, ಸೈರಿಸು; ಖಳ: ದುಷ್ಟ; ಘಲ್ಲಣೆ: ಘಲ್ ಎಂಬ ಶಬ್ದ; ವೈನತೇಯ: ಗರುಡ; ಪಕ್ಷ: ರೆಕ್ಕೆ; ಹತ: ಹೊಡೆತ; ಪವಮಾನ: ಗಾಳಿ; ಭಟ: ಸೈನಿಕರು; ಸುಯ್ಲು: ನಿಟ್ಟುಸಿರು; ನಿರೂಢಿ: ಸಾಮಾನ್ಯ; ಸುರ: ದೇವತೆ; ಸೂಸು: ಹರಡು; ದೆಸೆ: ದಿಕ್ಕು;
ಪದವಿಂಗಡಣೆ:
ಏನನೆಂಬೆನು +ಜೀಯ +ಬಳಿಕ+ಆ
ದಾನವ+ಅಧಿಪರ್+ಉಬ್ಬೆಯನು +ಸುರ
ಮಾನವರು+ ತರಹರಿಸಲ್+ಅಳವೇ +ಖಳರ +ಘಲ್ಲಣೆಯ
ವೈನತೇಯನ +ಪಕ್ಷಹತ+ ಪವ
ಮಾನನಂತಿರೆ +ಭಟರ+ ಸುಯ್ಲಿನೊಳ್
ಆ+ ನಿರೂಢಿಯ +ಸುರರು +ಹಾರಿತು +ಸೂಸಿ +ದೆಸೆದೆಸೆಗೆ
ಅಚ್ಚರಿ:
(೧) ದಾನವ, ಖಳ – ರಾಕ್ಷಸರನ್ನು ಕರೆಯುವ ಪರಿ
(೨) ಉಪಮಾನದ ಪ್ರಯೋಗ – ವೈನತೇಯನ ಪಕ್ಷಹತ ಪವಮಾನನಂತಿರೆ