ಪದ್ಯ ೩೫: ರಾಕ್ಷಸರ ದಾಳಿಯ ವೇಗೆ ಹೇಗಿತ್ತು?

ಏನನೆಂಬೆನು ಜೀಯ ಬಳಿಕಾ
ದಾನವಾಧಿಪರುಬ್ಬೆಯನು ಸುರ
ಮಾನವರು ತರಹರಿಸಲಳವೇ ಖಳರ ಘಲ್ಲಣೆಯ
ವೈನತೇಯನ ಪಕ್ಷಹತ ಪವ
ಮಾನನಂತಿರೆ ಭಟರ ಸುಯ್ಲಿನೊ
ಳಾ ನಿರೂಢಿಯ ಸುರರು ಹಾರಿತು ಸೂಸಿ ದೆಸೆದೆಸೆಗೆ (ಅರಣ್ಯ ಪರ್ವ, ೧೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಅಣ್ಣಾ ನಾನು ಏನೆಂದು ಹೇಳಲಿ, ಆ ರಾಕ್ಷಸ ವೀರರ ರಭಸವನ್ನು ದೇವತೆಗಳು, ಮನುಷ್ಯರು ತಡೆದುಕೊಳ್ಳಲು ಸಾಧ್ಯವೇ? ಗರುಡನ ರೆಕ್ಕೆಯ ಬಡಿತಕ್ಕೆ ಸದು ಮಾಡುತ್ತಾ ಬರುವ ಗಾಳಿಯೋ ಎಂಬಂತೆ ರಾಕ್ಷಸವೀರರ ನಿಶ್ವಾಸಕ್ಕೆ ದೇವತೆಗಳು ದಿಕ್ಕಾಪಾಲಾಗಿ ಓಡಿದರು.

ಅರ್ಥ:
ಜೀಯ: ಒಡೆಯ; ಬಳಿಕ: ನಂತರ; ದಾನವ: ರಾಕ್ಷಸ; ಅಧಿಪ: ರಾಜ; ಉಬ್ಬೆ: ರಭಸ, ಉದ್ವೇಗ; ಸುರ: ದೇವತೆ; ಮಾನವ: ನರ; ತರಹರಿಸು: ತಡಮಾಡು, ಸೈರಿಸು; ಖಳ: ದುಷ್ಟ; ಘಲ್ಲಣೆ: ಘಲ್ ಎಂಬ ಶಬ್ದ; ವೈನತೇಯ: ಗರುಡ; ಪಕ್ಷ: ರೆಕ್ಕೆ; ಹತ: ಹೊಡೆತ; ಪವಮಾನ: ಗಾಳಿ; ಭಟ: ಸೈನಿಕರು; ಸುಯ್ಲು: ನಿಟ್ಟುಸಿರು; ನಿರೂಢಿ: ಸಾಮಾನ್ಯ; ಸುರ: ದೇವತೆ; ಸೂಸು: ಹರಡು; ದೆಸೆ: ದಿಕ್ಕು;

ಪದವಿಂಗಡಣೆ:
ಏನನೆಂಬೆನು +ಜೀಯ +ಬಳಿಕ+ಆ
ದಾನವ+ಅಧಿಪರ್+ಉಬ್ಬೆಯನು +ಸುರ
ಮಾನವರು+ ತರಹರಿಸಲ್+ಅಳವೇ +ಖಳರ +ಘಲ್ಲಣೆಯ
ವೈನತೇಯನ +ಪಕ್ಷಹತ+ ಪವ
ಮಾನನಂತಿರೆ +ಭಟರ+ ಸುಯ್ಲಿನೊಳ್
ಆ+ ನಿರೂಢಿಯ +ಸುರರು +ಹಾರಿತು +ಸೂಸಿ +ದೆಸೆದೆಸೆಗೆ

ಅಚ್ಚರಿ:
(೧) ದಾನವ, ಖಳ – ರಾಕ್ಷಸರನ್ನು ಕರೆಯುವ ಪರಿ
(೨) ಉಪಮಾನದ ಪ್ರಯೋಗ – ವೈನತೇಯನ ಪಕ್ಷಹತ ಪವಮಾನನಂತಿರೆ

ನಿಮ್ಮ ಟಿಪ್ಪಣಿ ಬರೆಯಿರಿ