ಪದ್ಯ ೩೪: ರಾಕ್ಷಸ ಭಟರು ಹೇಗೆ ಮುನ್ನುಗ್ಗಿದರು?

ಎಲೆಲೆ ಸುರಪತಿಯಾಳು ಕೋಟೆಯ
ನಿಳಿವುತದೆ ನಡೆಯೆನುತ ದಾನವ
ರುಲಿದು ಕವಿದುದು ಖಾತಿಯಲಿ ಮಿಗೆ ಭಾಷೆಗಳ ಕೊಡುತ
ತಲೆಯ ಹೊಯ್ದಡೆಗೆಡಹು ಸುರಪನ
ಲಲನೆಯರು ಮುಂದಲೆಯಕೊಯ್ ಹುಲು
ಸುರರು ಸರಿಯೇ ಮಝಯೆನುತ್ತೈದಿದರು ರಣಭಟರು (ಅರಣ್ಯ ಪರ್ವ, ೧೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ರಾಕ್ಷಸ ಸೈನಿಕರು, ಎಲವೊ ಎಲವೋ ದೇವತೆಗಳು ಕೋಟೆಯೊಳಕ್ಕೆ ಇಳಿಯುತ್ತಿದ್ದಾರೆ, ಮುನ್ನುಗ್ಗಿ, ನಡೆಯಿರಿ ತಡೆಯೋಣ ಎನ್ನುತ್ತಾ ಭಾಷೆಗಳನ್ನು ಮಾಡುತ್ತಾ ಶತ್ರುಗಳ ತಲೆಯನ್ನು ಹೊಯ್ದು ಹಾಕು, ಕೆಳಕ್ಕೆ ಕೆಡವು, ಅಪ್ಸರೆಯರ ಮುಂದಲೆಯನ್ನು ಕೊಯ್, ಈ ಕೆಲಸಕ್ಕೆ ಬಾರದ ದೇವತೆಗಳು ನಮಗೆ ಸರಿಯೇ ಎನ್ನುತ್ತಾ ಮುಂದೆ ನುಗ್ಗಿದರು.

ಅರ್ಥ:
ಸುರಪತಿ: ಇಂದ್ರ; ಆಳು: ಸೇವಕ; ಕೋಟೆ: ದುರ್ಗ; ಇಳಿ: ಕೆಳಕ್ಕೆ ಬಾ; ನಡೆ: ಮುನ್ನುಗ್ಗು; ದಾನವ: ರಾಕ್ಷಸ; ಉಲಿ: ಅರಚು; ಕವಿ: ಆವರಿಸು; ಖಾತಿ: ಕೋಪ, ಕ್ರೋಧ; ಮಿಗೆ: ಮತ್ತು, ಅಧಿಕ; ಭಾಷೆ: ಮಾತು; ಕೊಡು: ನೀಡು; ತಲೆ: ಶಿರ; ಹೊಯ್ದು: ಹೊಡೆ; ಕೆಡಹು: ಕೆಳಕ್ಕೆ ನೂಕು; ಲಲನೆ: ಹೆಣ್ಣು; ಸುರಪ: ಇಂದ್ರ; ಮುಂದಲೆ: ತಲೆಯ ಮುಂಭಾಗ; ಕೊಯ್: ಸೀಳು; ಹುಲು:ಕ್ಷುದ್ರ, ಅಲ್ಪ; ಸುರ: ದೇವತೆ; ಸರಿ: ಸಮಾನ; ಮಝ: ಕೊಂಡಾಟದ ಒಂದು ಮಾತು; ಐದು: ಬಂದು ಸೇರು; ರಣ: ಯುದ್ಧ; ಭಟ: ಸೈನಿಕ, ಪರಾಕ್ರಮಿ;

ಪದವಿಂಗಡಣೆ:
ಎಲೆಲೆ +ಸುರಪತಿ+ಆಳು +ಕೋಟೆಯನ್
ಇಳಿವುತದೆ +ನಡೆ+ಎನುತ +ದಾನವರ್
ಉಲಿದು +ಕವಿದುದು +ಖಾತಿಯಲಿ +ಮಿಗೆ +ಭಾಷೆಗಳ +ಕೊಡುತ
ತಲೆಯ+ ಹೊಯ್ದಡೆ+ಕೆಡಹು+ ಸುರಪನ
ಲಲನೆಯರು+ ಮುಂದಲೆಯ+ಕೊಯ್+ ಹುಲು
ಸುರರು +ಸರಿಯೇ +ಮಝ+ಯೆನುತ್+ಐದಿದರು+ ರಣ+ಭಟರು

ಅಚ್ಚರಿ:
(೧) ಸುರಪತಿ, ಸುರಪ – ಸಮನಾರ್ಥಕ ಪದ
(೨) ರಾಕ್ಷಸರ ಆರ್ಭಟ – ತಲೆಯ ಹೊಯ್ದಡೆಗೆಡಹು ಸುರಪನ ಲಲನೆಯರು ಮುಂದಲೆಯಕೊಯ್ ಹುಲು ಸುರರು ಸರಿಯೇ

ನಿಮ್ಮ ಟಿಪ್ಪಣಿ ಬರೆಯಿರಿ