ಪದ್ಯ ೩೦: ದಾನವ ರಾಜನು ಹೇಗೆ ಅಬ್ಬರಿಸಿದನು?

ನೆರೆದಿರೈ ಪರಿಭವದ ನೆಲೆಯಲಿ
ನೆರೆದಿರೈ ದುಷ್ಕೀರ್ತಿ ಸತಿಯಲಿ
ನೆರೆದಿರೈ ಸಲೆ ಹೊರೆದಿರೈ ದುರ್ಗತಿಗೆ ಡೊಳ್ಳುಗಳ
ಸುರರಲೇ ನೀವ್ ನಿಮ್ಮ ಹೆಂಡಿರ
ಕುರುಳ ಕೈದೊಳಸಿಂಗೆ ಮಿಗೆ ಕಾ
ತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆಂದ (ಅರಣ್ಯ ಪರ್ವ, ೧೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ದಾನವ ರಾಜನು ತನ್ನ ಸೈನಿಕರಿಗೆ, ಸೋಲಿನ ಬೀಡಿನಲ್ಲಿ ಸೇರಿದ್ದೀರಿ, ದುಷ್ಕೀರ್ತಿ ನಾರಿಯ ಸಂಗಕ್ಕೆ ಹೋದಿರಿ, ಈ ದುರ್ಗತಿಯನ್ನು ಅನುಭವಿಸಲೆಂದು ಡೊಳ್ಳು ಹೊಟ್ಟೆಗಳನ್ನು ಬೆಳೆಸಿದ್ದೀರಿ, ನಿಮ್ಮ ಹೆಂಡಿರ ಕರುಳಿನಲ್ಲಿ ದೇವತೆಗಳು ಕೈಯಾಡಿಸಲು ಕಾತರರಗಿದ್ದಾರೆ, ನೀವಿಲ್ಲಿ ತೆಪ್ಪಗಿದ್ದೀರಿ, ದೇವೇಂದ್ರನ ಮೇಲಿನ ಕೋಪವನ್ನು ಬಿಟ್ಟು ತೆಪ್ಪಗಿರಿ ಎಂದು ದಾನವರಾಜನು ಅಬ್ಬರಿಸಿದನು.

ಅರ್ಥ:
ನೆರೆ: ಸೇರು, ಗುಂಪು; ಪರಿಭವ: ಸೋಲು, ಪರಾಜಯ; ನೆಲೆ: ಸ್ಥಾನ; ದುಷ್ಕೀರ್ತಿ: ಅಪಯಶಸ್ಸು; ಸತಿ: ಹೆಂಡತಿ; ಸಲೆ: ಒಂದೇ ಸಮನೆ, ಸದಾ; ಹೊರೆ: ಹೊದಿಕೆ; ದುರ್ಗತಿ: ಕೆಟ್ಟ ಸ್ಥಿತಿ; ಡೊಳ್ಳು: ಬೊಜ್ಜು ಬೆಳೆದ ಹೊಟ್ಟೆ; ಸುರ: ದೇವತೆ; ಹೆಂಡಿರು: ಪತ್ನಿ; ಕುರುಳ: ಮರುಕ, ಪ್ರೀತಿ, ಅಂತಃಕರಣ; ಕೈದೊಳಸು: ಕೈವಶ, ಅಧೀನ; ಮಿಗೆ: ಅಧಿಕ, ಮತ್ತು; ಕಾತರಿಸು: ತವಕಗೊಳ್ಳು; ವಾಸವ: ಇಂದ್ರ; ವಾಸಿ: ಛಲ, ಹಠ; ಬಿಡಿ: ತೊರೆ;

ಪದವಿಂಗಡಣೆ:
ನೆರೆದಿರೈ +ಪರಿಭವದ +ನೆಲೆಯಲಿ
ನೆರೆದಿರೈ+ ದುಷ್ಕೀರ್ತಿ +ಸತಿಯಲಿ
ನೆರೆದಿರೈ +ಸಲೆ +ಹೊರೆದಿರೈ+ ದುರ್ಗತಿಗೆ+ ಡೊಳ್ಳುಗಳ
ಸುರರಲೇ+ ನೀವ್+ ನಿಮ್ಮ+ ಹೆಂಡಿರ
ಕುರುಳ +ಕೈದೊಳಸಿಂಗೆ +ಮಿಗೆ +ಕಾ
ತರಿಸುತಿದೆ+ ವಾಸವನೊಡನೆ+ ವಾಸಿಗಳ+ ಬಿಡಿಯೆಂದ

ಅಚ್ಚರಿ:
(೧) ಸೋಲಿಸುತ್ತಾರೆ ಎಂದು ಹೇಳುವ ಪರಿ – ನೆರೆದಿರೈ ಪರಿಭವದ ನೆಲೆಯಲಿ, ನೆರೆದಿರೈ ದುಷ್ಕೀರ್ತಿ ಸತಿಯಲಿ, ಸುರರಲೇ ನೀವ್ ನಿಮ್ಮ ಹೆಂಡಿರ ಕುರುಳ ಕೈದೊಳಸಿಂಗೆ
(೨) ಇಂದ್ರನನ್ನು ಕರೆದ ಪರಿ – ಕಾತರಿಸುತಿದೆ ವಾಸವನೊಡನೆ ವಾಸಿಗಳ ಬಿಡಿಯೆಂದ

ನಿಮ್ಮ ಟಿಪ್ಪಣಿ ಬರೆಯಿರಿ