ಪದ್ಯ ೨೯: ಎಂತಹ ರಾಕ್ಷಸರು ಯುದ್ಧಕ್ಕೆ ಬಂದರು?

ನೆರೆದರಸುರರು ಕಾಳಕೂಟದ
ಕರುವಿನೆರಕವೊ ಸಿಡಿಲದಳ್ಳುರಿ
ತಿರುಳ ದಡ್ಡಿಯೊ ಪ್ರಳಯ ಭೈರವನುಬ್ಬಟೆಯ ಪಡೆಯೊ
ಹರನ ನಯನಜ್ವಾಲೆಯವದಿರ
ಗರುಡಿಯೋ ಗಾಢಾಯ್ಲ ತೇಜದ
ದುರುಳದಾನವ ಭಟರು ಬಂದರು ಕೋಟಿ ಸಂಖ್ಯೆಯಲಿ (ಅರಣ್ಯ ಪರ್ವ, ೧೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕಾಳಕೂಟ ವಿಷದ ಮರಿಯ ಎರಕವೋ, ಸಿಡಿಲಿನ ದಳ್ಳುರಿಯ ತಿರುಳಿನ ಕವಾಟವೋ, ಪ್ರಳಯ ಕಾಲದ ಭೈರವನ ಮೀಸಲು ಪಡೆಯೋ, ಶಿವನ ಉರಿಗಣ್ಣಿನ ಜ್ವಾಲೆಯ ಗರುಡಿಯಾಳುಗಳೋ ಎನ್ನುವಂತಹ ದುಷ್ಟರಕ್ಕಸರು ಅಸಂಖ್ಯಾತರಾಗಿ ಬಂದರು.

ಅರ್ಥ:
ನೆರೆ: ಗುಂಪು; ಅಸುರ: ದಾನವ; ಕಾಳಕೂಟ: ವಿಷದ; ಕರು: ಚಿಕ್ಕ ಮರಿ; ಎರಕ: ಸುರಿ, ತುಂಬು, ಸ್ನೇಹ; ಸಿಡಿಲು: ಅಶನಿ, ಆರ್ಭಟಿಸು; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ತಿರುಳು: ಸಾರ; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಉಬ್ಬಟೆ: ಅತಿಶಯ, ಹಿರಿಮೆ; ಪಡೆ: ಗುಂಪು; ಹರ: ಶಿವ; ನಯನ: ಕಣ್ಣು; ಜ್ವಾಲೆ: ಬೆಂಕಿ; ಅವದಿರು: ಅವರು; ಗರುಡಿ: ವ್ಯಾಯಾಮಶಾಲೆ; ಗಾಢಾಯ್ಲ: ದಟ್ಟವಾದ; ತೇಜ: ಕಾಂತಿ, ಪ್ರಕಾಶ; ದುರುಳ: ದುಷ್ಟ; ದಾನವ: ರಾಕ್ಷಸ; ಭಟ: ಸೈನಿಕರು; ಬಂದರು: ಆಗಮಿಸು; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ನೆರೆದರ್+ಅಸುರರು +ಕಾಳಕೂಟದ
ಕರುವಿನ್+ಎರಕವೊ +ಸಿಡಿಲ+ದಳ್ಳುರಿ
ತಿರುಳ +ದಡ್ಡಿಯೊ +ಪ್ರಳಯ +ಭೈರವನ್+ಉಬ್ಬಟೆಯ +ಪಡೆಯೊ
ಹರನ +ನಯನ+ಜ್ವಾಲೆ+ಅವದಿರ
ಗರುಡಿಯೋ+ ಗಾಢಾಯ್ಲ +ತೇಜದ
ದುರುಳ+ದಾನವ +ಭಟರು +ಬಂದರು+ ಕೋಟಿ +ಸಂಖ್ಯೆಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ: ನೆರೆದರಸುರರು ಕಾಳಕೂಟದ ಕರುವಿನೆರಕವೊ, ಸಿಡಿಲದಳ್ಳುರಿ
ತಿರುಳ ದಡ್ಡಿಯೊ, ಪ್ರಳಯ ಭೈರವನುಬ್ಬಟೆಯ ಪಡೆಯೊ, ಹರನ ನಯನಜ್ವಾಲೆಯವದಿರ
ಗರುಡಿಯೋ

ನಿಮ್ಮ ಟಿಪ್ಪಣಿ ಬರೆಯಿರಿ