ಪದ್ಯ ೨೬: ಅರ್ಜುನನ ಮೇಲೆ ಯಾವ ದೂರನ್ನು ಹೇಳಿದರು?

ನೂಕಿ ದೈತ್ಯರ ಚೂಣಿಯನು ಮುರಿ
ದೌಕಿ ದುರ್ಗವ ಹೊಗಿಸಿದೆನು ಸ
ವ್ಯಾಕುಲರು ಸೂಸಿದರು ಭಯವ ನಿವಾತಕವಚರಿಗೆ
ಆಕೆವಾಳನು ಜೀಯ ನಮ್ಮ ದಿ
ವೌಕಸರ ಪರಿಯಲ್ಲ ಯುದ್ಧ
ವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು (ಅರಣ್ಯ ಪರ್ವ, ೧೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ದೈತ್ಯರ ಸೈನ್ಯವನ್ನು ಹಿಮ್ಮೆಟ್ಟಿಸಿ ಕೋಟೆಯೊಳಕ್ಕೆ ಹೋಗುವಂತೆ ಮಾಡಿದೆನು. ನೊಂದ ಅವರು ನಿವಾತಕವಚರಿಗೆ ನನ್ನ ಮೇಲೆ ದೂರು ಹೇಳಿದರು. ಒಡೆಯ, ಯುದ್ಧಕ್ಕೆ ಬಂದವನು ದೇವತೆಗಳಂತೆ ತೋರುವುದಿಲ್ಲ, ಅವನು ವೀರ, ಯುದ್ಧ ವ್ಯಾಕರಣದ ಪಂಡಿತ ಎಂದು ವರ್ಣಿಸಿದರು.

ಅರ್ಥ:
ನೂಕು: ತಳ್ಳು; ದೈತ್ಯ: ರಾಕ್ಷಸ; ಚೂಣಿ: ಮುಂಭಾಗ; ಮುರಿ: ಸೀಳು; ಔಕು: ಒತ್ತು; ದುರ್ಗ: ಕೋಟೆ; ಹೊಗಿಸು: ಹೋಗು, ತೆರಳು; ವ್ಯಾಕುಲ: ದುಃಖ, ವ್ಯಥೆ; ಸೂಸು: ಎರಚು, ಚಲ್ಲು; ಭಯ: ಅಂಜಿಕೆ; ಆಕೆವಾಳ: ಪರಾಕ್ರಮಿ; ಜೀಯ: ಒಡೆಯ; ದಿವೌಕ: ದೇವತೆ; ಪರಿ: ರೀತಿ; ಯುದ್ಧ: ಕಾಳಗ; ವ್ಯಾಕರಣ: ನಿಯಮ; ಪಾಂಡಿತ್ಯ: ತಿಳಿದವ, ವಿದ್ವತ್ತು; ದೂರು: ಆರೋಪ ಮಾಡು, ಆಕ್ಷೇಪಿಸು;

ಪದವಿಂಗಡಣೆ:
ನೂಕಿ +ದೈತ್ಯರ +ಚೂಣಿಯನು +ಮುರಿದ್
ಔಕಿ+ ದುರ್ಗವ+ ಹೊಗಿಸಿದೆನು +ಸ
ವ್ಯಾಕುಲರು +ಸೂಸಿದರು+ ಭಯವ +ನಿವಾತಕವಚರಿಗೆ
ಆಕೆವಾಳನು+ ಜೀಯ +ನಮ್ಮ +ದಿ
ವೌಕಸರ+ ಪರಿಯಲ್ಲ+ ಯುದ್ಧ
ವ್ಯಾಕರಣ+ ಪಾಂಡಿತ್ಯವುಂಟ್+ಎಂದೆನ್ನ+ ದೂರಿದರು

ಅಚ್ಚರಿ:
(೧) ಸುರರಿಗೆ ದಿವೌಕಸರ ಪದದ ಬಳಕೆ
(೨) ಪರಾಕ್ರಮಿ ಎಂದು ಹೇಳುವ ಪರಿ – ದಿವೌಕಸರ ಪರಿಯಲ್ಲ ಯುದ್ಧವ್ಯಾಕರಣ ಪಾಂಡಿತ್ಯವುಂಟೆಂದೆನ್ನ ದೂರಿದರು

ನಿಮ್ಮ ಟಿಪ್ಪಣಿ ಬರೆಯಿರಿ