ಪದ್ಯ ೧೫: ದೂತರು ರಾಕ್ಷಸ ರಾಜನಿಗೆ ಏನು ಹೇಳಿದರು?

ಜೀಯ ಬಲೆಗಳ ತೆಗೆಸು ನಡೆ ನಿ
ರ್ದಾಯದಲಿ ನಿಮ್ಮಡಿಯ ಬೇಟೆಗೆ
ರಾಯ ಮೃಗವೈತಂದವಿವೆ ನಗರೋಪಕಂಠದಲಿ
ಹೋಯಿತಸುರರ ಕೈಯ ಹೊಸದಿರು
ಪಾಯ ಪಾಯವಧಾರೆನಲು ಖಳ
ರಾಯಕೇಳುತ ಮೃಗವದಾವುದೆನುತ್ತ ಬೆಸಗೊಂಡ (ಅರಣ್ಯ ಪರ್ವ, ೧೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಜೀಯ ಬೇಟೆಗೆ ರಾಜಮೃಗಗಳು ಬಂದು ನಗರದ ಸಮೀಪದಲ್ಲಿವೆ. ನೀನು ತಪ್ಪದೆ ಬಲೆಗಳನ್ನು ತೆಗೆಸು, ಬೇಟೆಗೆ ಹೊರಡು. ಅಸುರರು ಆ ಮೃಗಗಳನ್ನು ಇಕ್ಕಟ್ಟಿನಲ್ಲಿ ಸಿಕ್ಕಿ ಹಾಸಿಸುವ ಕಷ್ಟವೇ ತಪ್ಪಿತು ಎಚ್ಚರಿಕೆ ಎಂದು ಹೇಳಲು, ರಾಕ್ಷಸ ರಾಜನು ಯಾವ ಮೃಗ ಬಂದಿದೆ ಎಂದು ಕೇಳಿದನು.

ಅರ್ಥ:
ಜೀಯ: ಒಡೆಯ; ಬಲೆ: ಜಾಲ, ಬಂಧನ; ತೆಗೆ: ಹೊರತರು; ನಡೆ; ಚಲಿಸು; ನಿರ್ದಾಯದ: ಅಖಂಡ; ನಿಮ್ಮಡಿ: ನಿಮ್ಮ ಪಾದ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವ ಕ್ರೀಡೆ; ರಾಯ: ರಾಜ; ಮೃಗ: ಪ್ರಾಣಿ; ಐತರು: ಬಂದು ಸೇರು; ನಗರ: ಊರು; ಉಪಕಂಠ: ಹತ್ತಿರ; ಹೋಯಿತು:ಕಳೆದುಕೊಳ್ಳು; ಅಸುರ: ರಾಕ್ಷಸ; ಕೈಯ: ಹಸ್ತ; ಹೊಸೆ: ಮಥಿಸು; ಉಪಾಯ: ಯುಕ್ತಿ; ಪಾಯವಧಾರು: ಎಚ್ಚರಿಕೆ; ಖಳರಾಯ: ದುಷ್ಟರಾಜ; ಕೇಳು: ಆಲಿಸು;ಬ ಬೆಸ: ಕೆಲಸ, ಕಾರ್ಯ;

ಪದವಿಂಗಡಣೆ:
ಜೀಯ+ ಬಲೆಗಳ+ ತೆಗೆಸು+ ನಡೆ +ನಿ
ರ್ದಾಯದಲಿ +ನಿಮ್ಮಡಿಯ +ಬೇಟೆಗೆ
ರಾಯ +ಮೃಗವ್+ಐತಂದವ್+ಇವೆ +ನಗರೋಪಕಂಠದಲಿ
ಹೋಯಿತ್+ಅಸುರರ+ ಕೈಯ +ಹೊಸದಿರ್
ಉಪಾಯ +ಪಾಯವಧಾರೆನಲು +ಖಳ
ರಾಯ+ಕೇಳುತ +ಮೃಗವದ್+ಆವುದೆನುತ್ತ+ ಬೆಸಗೊಂಡ

ಅಚ್ಚರಿ:
(೧) ಜೀಯ, ರಾಯ – ಸಮನಾರ್ಥಕ ಪದ
(೨) ನ ಕಾರದ ತ್ರಿವಳಿ ಪದ – ನಡೆ ನಿರ್ದಾಯದಲಿ ನಿಮ್ಮಡಿಯ

ನಿಮ್ಮ ಟಿಪ್ಪಣಿ ಬರೆಯಿರಿ